ಬೆಂಗಳೂರು | ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಪ್ರಾಧ್ಯಾಪಕರಿಗೆ ವಂಚನೆ ಆರೋಪ : ಪ್ರಕರಣ ದಾಖಲು

ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಹೇಳಿ ಪ್ರಾಧ್ಯಾಪಕರೊಬ್ಬರಿಗೆ 35 ಲಕ್ಷ ರೂ. ವಂಚಿಸಿರುವ ಆರೋಪದಡಿ ಇಲ್ಲಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ವಂಚನೆಗೊಳಗಾದ ನಿವೃತ್ತ ಪ್ರಾಧ್ಯಾಪಕ ಆರ್.ಕೆ.ಸೋಮಶೇಖರ್ (67) ಎಂಬುವರು ನೀಡಿದ ದೂರಿನನ್ವಯ ಬಿ.ಜಿ.ರವಿಕುಮಾರ್ ಎಂಬುವವರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.
ದೂರುದಾರ ಆರ್.ಕೆ.ಸೋಮಶೇಖರ್ 1983ರಿಂದ ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು, 2019ರಲ್ಲಿ ನಿವೃತ್ತರಾಗಿದ್ದರು. ಈ ನಡುವೆ 2010ರಲ್ಲಿ ಸ್ನೇಹಿತರ ಮೂಲಕ ಆರೋಪಿ ಬಿ.ಜಿ.ರವಿಕುಮಾರ್ ಪರಿಚಯವಾಗಿ ಬಳಿಕ ಸ್ನೇಹಿತರಾಗಿದ್ದರು. 2015ರಲ್ಲಿ ಬಿ.ಜಿ.ರವಿಕುಮಾರ್ ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ. ತಮಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ನಂಬಿಸಿದ್ದ. ಅದಕ್ಕೆ 50 ಲಕ್ಷ ರೂ. ಖರ್ಚಾಗಲಿದೆ ಎಂದು ಬಿ.ಜಿ.ರವಿಕುಮಾರ್ ಹೇಳಿದ್ದರು. ಬಳಿಕ ಇಬ್ಬರೂ ಮಾತುಕತೆ ನಡೆಸಿ 35 ಲಕ್ಷ ರೂ.ಗೆ ತೀರ್ಮಾನಿಸಲಾಗಿತ್ತು. ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುವುದಾಗಿಯೂ ಬಿ.ಜಿ.ರವಿಕುಮಾರ್ ಹೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2015ರ ಜುಲೈನಲ್ಲಿ ವಿವಿಧ ಹಂತಗಳಲ್ಲಿ ಬಿ.ಜಿ.ರವಿಕುಮಾರ್ಗೆ ನಗದು ರೂಪದಲ್ಲಿ ಒಟ್ಟು 35 ಲಕ್ಷ ರೂ. ನೀಡಿದ್ದು, 6 ತಿಂಗಳೊಳಗೆ ಕೆಲಸ ಆಗಲಿದೆ ಎಂದು ಬಿ.ಜಿ.ರವಿಕುಮಾರ್ ಹೇಳಿದ್ದರು. ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಸೂಚಿಸಿದ್ದರು. ಆರು ತಿಂಗಳ ಬಳಿಕ ವಿಚಾರಿಸಿದಾಗ ಇಲ್ಲದ ಸಬೂಬು ಹೇಳಿ ಆರೋಪಿ ಬಿ.ಜಿ.ರವಿಕುಮಾರ್ ದಿನ ದೂಡುತ್ತಿದ್ದ. ಅಷ್ಟರಲ್ಲಿ ತಾನು ಸೇವೆಯಿಂದ ನಿವೃತ್ತನಾಗಿದ್ದು, ತಮ್ಮ ಹಣ ವಾಪಸ್ ನೀಡುವಂತೆ ಕೇಳಿದ್ದೆ. ಒಂದು ವರ್ಷದ ಸಮಯ ಕೊಡಿ ಎಂದ ರವಿಕುಮಾರ್ ನಂತರವೂ ಹಣ ವಾಪಸ್ ನೀಡಿಲ್ಲ. 2024ರ ಡಿಸೆಂಬರ್ನಲ್ಲಿ ಕರೆ ಮಾಡಿ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಆರ್.ಕೆ.ಸೋಮಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ 2025ರ ಮಾರ್ಚ್ 9ರಂದು ಬೆಂಗಳೂರಿನ ವಿಜಯನಗರದ ಖಾಸಗಿ ಹೋಟೆಲ್ವೊಂದಕ್ಕೆ ಕರೆಸಿಕೊಂಡಿದ್ದ ಬಿ.ಜಿ.ರವಿಕುಮಾರ್, ಚಾಕು ತೆಗೆದು ಕುತ್ತಿಗೆಗೆ ಹಿಡಿದು ಇನ್ನು ಮುಂದೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರ್.ಕೆ.ಸೋಮಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದರಾಜನಗರ ಠಾಣೆ ಪೊಲೀಸ್ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.







