ಕೆಲಸದಲ್ಲಿ ಕೌಶಲ್ಯವಿಲ್ಲದಿದ್ದರೆ ಪ್ರಯೋಜನವಿಲ್ಲ : ಸಚಿವ ಸಂತೋಷ್ ಲಾಡ್
‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ’

ಬೆಂಗಳೂರು : ಯಾವುದೇ ಕೆಲಸದಲ್ಲಿ ಕೌಶಲ್ಯವಿಲ್ಲದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಕಟ್ಟಡ ಕಾರ್ಮಿಕರಿಂದ ಹಿಡಿದು ಇಂಜಿನಿಯರ್ಗಳ ವರೆಗೆ ಎಲ್ಲರಿಗೂ ಕೌಶಲ್ಯ ಅಗತ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಶುಕ್ರವಾರ ವಿಕಾಸಸೌಧದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮೈಸೂರು ಹಾಗೂ ಧಾರವಾಡದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ಬಗ್ಗೆ ತರಬೇತಿಯನ್ನು ನೀಡುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಕೌಶಲ್ಯ ದೊರೆತರೆ ಅವರು, ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡುವುದಲ್ಲದೆ ಗುಣಮಟ್ಟವನ್ನು ಕಾಯ್ದುಕೊಳ್ಳಬಲ್ಲರು. ಕೌಶಲ್ಯಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಬೇರೆ ಬೇರೆ ಕೌಶಲ್ಯಗಳ ಅಗತ್ಯ ಮತ್ತು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಉನ್ನತೀಕರಿಸಿದ ಕೌಶಲ್ಯದ ಪ್ರಾಮುಖ್ಯತೆ ಮನಗಂಡು ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಪ್ರಯತ್ನಕ್ಕೆ ಉದ್ಯಮಿಗಳು, ಕೈಗಾರಿಕೆಗಳ ಮುಖ್ಯಸ್ಥರು ಆಸಕ್ತಿ ತೋರಿ ಮುಂದೆ ಬರಬೇಕು ಎಂದು ಸಂತೋಷ್ ಲಾಡ್ ಮನವಿ ಮಾಡಿದರು.
ಕಟ್ಟಡ ಕಾರ್ಮಿಕರಿಗೆ ತರಬೇತಿ ಪಡೆದ ಕೌಶಲ್ಯ ಇದ್ದರೆ ಅವರು ನಿರುದ್ಯೋಗಿಗಳಾಗುವ ಪ್ರಮೆಯವೇ ಬರುವುದಿಲ್ಲ. ಒಳ್ಳೆಯ ಪ್ರಮಾಣಪತ್ರ ಇದ್ದರೆ ವಿದೇಶಗಳಲ್ಲೂ ಉದ್ಯೋಗ ಪಡೆಯಬಹುದು. ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಾರ್ಮಿಕರೇ ಆಗದೇ ಒಳ್ಳೆಯ ಕೌಶಲ್ಯ ಪಡೆದು ವೃತ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ಹೇಳಿದರು.
ಯಾವುದೊ ಒಂದು ಪದವಿ ಪಡೆದಾಕ್ಷಣ ಕೆಲಸ ಸಿಗಲೇಬೇಕು ಎಂದೇನಿಲ್ಲ. ಕೆಲಸ ಸಿಗುವುದು ಅಷ್ಟು ಸುಲಭವೂ ಅಲ್ಲ. ಅವರ ಶಿಕ್ಷಣಕ್ಕೆ ಸರಿಯಾದ ಕೌಶಲ್ಯ ಇದ್ದರೆ ಅವರಿಗೆ ಕೆಲಸ ಸಿಗುತ್ತದೆ. ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕೌಶಲ್ಯದ ಬಗ್ಗೆ ಯೋಚಿಸಿದರೆ ಅನುಕೂಲ. ಈ ಕೌಶಲ್ಯ ನೀಡಲು ಸರಕಾರ ಸದಾ ಬದ್ಧವಿದೆ ಎಂದು ಸಂತೋಷ್ ಲಾಡ್ ವಿವರಿಸಿದರು.
ನಿರ್ಮಾಣದ ಕಾರ್ಯವ್ಯಾಪ್ತಿ ದೊಡ್ಡದಿದೆ. ಸಾಮಾನ್ಯ ಕಟ್ಟಡ ನಿರ್ಮಾಣದಿಂದ ಹಿಡಿದು ದೊಡ್ಡ ದೊಡ್ಡ ಅಣೆಕಟ್ಟುಗಳವರೆಗೆ ಸಾಕಷ್ಟು ಉದ್ಯೋಗಾವಕಾಶಗಳು ಸಿಗುತ್ತವೆ. ಆದರೆ ಕೌಶಲ್ಯ ಹೊಂದಿದ್ದರೆ ಈ ಕೆಲಸಗಳ ಅವಕಾಶಗಳು ಇನ್ನಷ್ಟು ದೊರೆಯುತ್ತವೆ. ಕೌಶಲ್ಯ ಕೇಂದ್ರಗಳನ್ನು ಎಲ್ಲರ ಸಲಹೆ, ಅಭಿಪ್ರಾಯ ಪಡೆದು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಹಾಜರಿದ್ದ ಹಲವರು ಕಾರ್ಮಿಕರ ಅನುಕೂಲಕ್ಕಾಗಿ ಏನೆಲ್ಲ ಸೌಲಭ್ಯಗಳನ್ನು ಒದಗಿಸಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಿದರು. ಈ ಕಾರ್ಯಾಗಾರದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕಾರ್ಮಿಕ ಇಲಾಖೆ ಆಯುಕ್ತ ಡಾ.ಗೋಪಾಲಕೃಷ್ಣ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ, ಅಪರ ಕಾರ್ಮಿಕ ಆಯುಕ್ತರಾದ ರವಿ ಕುಮಾರ್, ಡಾ.ಮಂಜುನಾಥ್, ಜಂಟಿ ಕಾರ್ಯದರ್ಶಿ ಸಂಗಪ್ಪ ಉಪಾಸೆ, ಉದ್ಯೋಗದಾತರ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಮಂಡಳಿಯ ಸದಸ್ಯರು ಭಾಗವಹಿಸಿದ್ದರು.







