ಸರಕಾರಿ ಕನ್ನಡ ಶಾಲೆಗಳು ಅತ್ಯುತ್ತಮವಾಗಲಿ: ಡಾ.ರಹಮತ್ ತರೀಕೆರೆ

ಬೆಂಗಳೂರು : ಸರಕಾರಿ ಕನ್ನಡ ಶಾಲೆಗಳು ಅತ್ಯುತ್ತಮವಾಗಬೇಕು. ಶಾಲೆಗಳು ಸೋರುತ್ತಿದ್ದರೆ, ಸರಿಯಾಗಿ ಶಿಕ್ಷಕರು ಇಲ್ಲದಿದ್ದರೆ, ಸರಕಾರ ಕನ್ನಡದ ಬಗ್ಗೆ ಮಾತನಾಡುವುದು ಕಷ್ಟ. ಅವು ಬಡವರ ಶಾಲೆಗಳು, ಯಾವುದೇ ಸರಕಾರ ರಾಜ್ಯ ಭಾಷೆಯ ಏಳಿಗೆಯನ್ನು ಶಾಲೆಗಳಿಂದ ಕಾಣಬೇಕು ಎಂದು ಹಿರಿಯ ಲೇಖಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ನಾವು ಕಲಿತ ಜಾತ್ಯಾತೀತತೆಯ ಪಾಠ ಆ ಶಾಲೆಗಳಲ್ಲಿದೆ. ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಸರಕಾರಿ ಶಾಲೆಗಳನ್ನು ಅನಾಥಗೊಳಿಸಬಾರದು ಎಂದು ಹೇಳಿದರು.
ಅತ್ಯುತ್ತಮ ಸೌಲಭ್ಯಗಳಿರುವ ಖಾಸಗಿ ಶಾಲೆಗಳಲ್ಲಿ ಮಕ್ಕಳು ಯಾವ ರೀತಿ ಮೌಲ್ಯಗಳನ್ನು ಕಲಿಯುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿನ ಮಕ್ಕಳು ಯಾವ ಮೌಲ್ಯಗಳನ್ನು ಕಲಿಯುತ್ತಿದ್ದಾರೆ ಎನ್ನುವುದನ್ನು ನೋಡಿದರೆ ಸರಕಾರಿ ಶಾಲೆಗಳ ಮಕ್ಕಳಿಗೆ ಹೆಚ್ಚು ಅಂಕ ಬರುತ್ತವೆ. ಸರಕಾರಿ ಶಾಲೆಗಳಲ್ಲಿ ಎಲ್ಲ ಜಾತಿಯ ಮಕ್ಕಳೂ ಒಟ್ಟಿಗೆ ಇರಬಹುದು. ನಾನು ಓದುವಾಗ ತರಗತಿಯಲ್ಲಿ ಯಾವತ್ತೂ ಮುಸ್ಲಿಂ ಎನ್ನುವ ಕಾರಣಕ್ಕೆ ತಾರತಮ್ಯ ಆಗಿಲ್ಲ. ಎಲ್ಲ ಶಿಕ್ಷಕರು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಇಂದು ಶಿಕ್ಷಕರ ಮನಸ್ಸು ಮಲೀನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತಿಹಾಸದ ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಚರಿತ್ರೆಯ ಭಾರವನ್ನು ಹೊರಿಸಿ ಹಿಂಸೆ ಮಾಡಲಾಗುತ್ತಿದೆ. ವಿದ್ಯಾರ್ಥಿ ಚರಿತ್ರೆಗೆ ಯಾವ ಬಗೆಯಲ್ಲೂ ಜವಾಬ್ಧಾರನಲ್ಲ. ಆದರೆ ಜವಾಬ್ಧಾರಿ ಹೊರಬೇಕು ಎನ್ನುವ ರೀತಿಯಲ್ಲಿ ಪಾಠ ಮಾಡುವುದು ನಡೆಯುತ್ತಿದೆ. ನನ್ನ ಕಾಲದಲ್ಲಿ ಶಾಲೆಗಳು ಸೋರುತ್ತಿದ್ದವು. ಆದರೆ ಶಿಕ್ಷಕರ ಮನಸ್ಸು ಕಲುಶಿತವಾಗಿರಲಿಲ್ಲ ಎಂದರು.
ಮನೆ ಅಂಗಳದಲ್ಲಿ ಸಾಮಾನ್ಯವಾಗಿ ಪುರುಷರು ಕುಳಿತು ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಮನೆ ಹಿತ್ತಲಿನಲ್ಲಿ ಮಹಿಳೆಯರು ಮಾತನಾಡುತ್ತಿರುತ್ತಾರೆ. ನಾನು ಹಿತ್ತಲ ಜಗತ್ತಿನ ಮನುಷ್ಯ. ಹಿತ್ತಲು ಎನ್ನುವುದು ಬಿಡುಗಡೆಯ ಹಾದಿ ಕೂಡ ಎಂದು ರಹಮತ್ ತರೀಕೆರೆ ತಿಳಿಸಿದರು.
ನನ್ನ ತಂದೆ ನನ್ನನ್ನು ಕನ್ನಡ ಶಾಲೆಗೆ ಸೇರಿಸದ್ದಿದ್ದರೆ, ನಾನು ಎಲ್ಲಿ ಇರುತ್ತಿದ್ದೆ ಎನ್ನುವುದು ಗೊತ್ತಿಲ್ಲ. ಉರ್ದು ಓದುವುದು, ಬರೆಯುವುದು ಕಷ್ಟಪಟ್ಟು ರೂಢಿಸಿಕೊಂಡೆ, ಕನ್ನಡ ಶಾಲೆಗೆ ಹೋಗಿರುವುದರಿಂದ ನಾನು ನಡೆಯುವ ಹಾದಿಯೇ ಬೇರೆಯಾಯಿತು ಎಂದರು.
ಮುಸ್ಲಿಂರನ್ನು ಕನ್ನಡ ಕಲಿಯದೇ ಇರುವ ಸಮುದಾಯ ಎನ್ನುವ ಪೂರ್ವಾಗ್ರಹ ಇವತ್ತಿಗೂ ಇದೆ. ನನ್ನ ಮಕ್ಕಳಿಬ್ಬರೂ ಕನ್ನಡ ಮಾದ್ಯಮದಲ್ಲಿಯೇ ಓದಿದ್ದಾರೆ. ಕನ್ನಡ ನನ್ನ ಪೊರೆದ ತಾಯಿ. ಎಂದಿಗೂ ಕೈ ಬಿಡಲಿಲ್ಲ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ 200-300 ವರ್ಷ ನಿಜಾಮರು ಆಳ್ವಿಕೆ ಮಾಡಿದರೂ ಕೂಡ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ. ಕನ್ನಡವನ್ನು ಬಿಟ್ಟು ಇಂಗ್ಲಿಷ್ ಕಲಿಯಬೇಕು ಎನ್ನುವುದು ಒಂದು ಆಲೋಚನಾ ಕ್ರಮವಿದೆ. ಆದರೆ ಕನ್ನಡದ ಜತೆಗೆ ಇಂಗ್ಲಿಷ್ ಕಲಿಯಬೇಕು ಎಂದು ತಿಳಿಸಿದರು.
ಇವತ್ತು ಎಲ್ಲ ಧರ್ಮಗಳನ್ನೂ ಗೌರವಿಸಬೇಕಿದೆ. ಆ ಧರ್ಮಗಳಲ್ಲಿ ಹುಟ್ಟುವ ವಿಕಾರಗಳನ್ನು ಮಾತ್ರ ವಿರೋಧಿಸಬೇಕಿದೆ. ಯಾವುದೇ ದೇಶ ಎಲ್ಲ ಸಮುದಾಯಗಳ ಕುಶಲತೆ, ಪ್ರತಿಭೆ, ಶ್ರಮದಿಂದ ಸಂಪತ್ತು ಬೆಳೆಯುತ್ತದೆ ಎಂದು ರಹಮತ್ ತರೀಕೆರೆ ಹೇಳಿದರು.
ಫೇಸ್ಬುಕ್, ವಾಟ್ಸ್ ಆಪ್ನಲ್ಲಿ ಬರುತ್ತಿರುವ ಬರಹಗಳನ್ನು ನೋಡಿದರೆ ಆಧುನಿಕ ವಿದ್ಯೆ ಮನುಷ್ಯತ್ವವನ್ನು ಕಳೆದುಹಾಕಿದೆ ಎಂದೆನಿಸುತ್ತದೆ. ಆಧುನಿಕ ಶಿಕ್ಷಣಕ್ಕೆ ತಾಯ್ತನ ಮತ್ತು ಮನುಷ್ಯತ್ವದ ಕೊರತೆಯಾಗಿದೆಯಾ ಎನ್ನುವ ಸಂಶಯ ಬರುತ್ತಿದೆ. ತ್ರಂತ್ರಜ್ಞಾನ ಮತ್ತು ಸೈನಿಕ ಶಕ್ತಿಯೇ ಬಹಳ ದೊಡ್ಡ ಸಾಧನೆ ಅಲ್ಲ ಎನ್ನುವುದನ್ನು ನಾವು ಇಸ್ರೇಲ್ ಮೂಲಕ ಕಲಿಯಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.







