ಭಾರತ ಜಾಗತಿಕ ತಂತ್ರಜ್ಞಾನ ಕೇಂದ್ರವಾಗುವ ಗುರಿ ಹೊಂದಿದೆ : ಕೇಂದ್ರ ಸಚಿವ ಪ್ರಿಯೂಷ್ ಗೋಯಲ್

ಬೆಂಗಳೂರು : ನಾವೀನ್ಯತೆಯ ಸಂಸ್ಕೃತಿ ಉತ್ತೇಜನ ಹಾಗೂ ಪ್ರತಿಭೆಗಳನ್ನು ಆಕರ್ಷಿಸುವ ಮೂಲಕ ಭಾರತವು ಜಾಗತಿಕ ತಂತ್ರಜ್ಞಾನ ಕೇಂದ್ರವಾಗುವ ಗುರಿ ಹೊಂದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಐಐಟಿ ಮದ್ರಾಸ್ನ ಸಂಗಮ್ 2025 ಜಾಗತಿಕ ಅನ್ವೇಷಣೆ ಮತ್ತು ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತವನ್ನು 2047ರೊಳಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೃಷ್ಟಿಕೋನವನ್ನು ಹೊಂದಿದೆ. ಅದರಂತೆ, ಅಭಿವೃದ್ಧಿಶೀಲ ಭಾರತದ ಸಂಕಲ್ಪ, ವಸಾಹತು ಚಿಂತನೆಗೆ ವಿದಾಯ, ಇತಿಹಾಸ ಹಾಗೂ ಸಂಸ್ಕೃತಿಗೆ ಮೌಲ್ಯ, ರಾಷ್ಟ್ರದ ಏಕತೆ ಹಾಗೂ ಅಖಂಡತೆಗೆ ಬದ್ಧತೆ ಮತ್ತು ಸಮಗ್ರ ಪಾಲ್ಗೊಳ್ಳುವಿಕೆ ನಮ್ಮ ಬದ್ಧತೆಗಳಾಗಿವೆ ಎಂದು ಪಿಯೂಷ್ ಗೋಯಲ್ ಹೇಳಿದರು.
ದಶಕದ ಹಿಂದೆ ಭಾರತ ಹಿಂದುಳಿದ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಆದರೆ, ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಹಲವು ಮಹತ್ವದ ಕಾರ್ಯಕ್ರಮಗಳ ಮೂಲಕ ಈ ತಡೆಗೋಡೆಯನ್ನು ದಾಟಿದರು. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್, ಲೋಕಲ್ ಟು ಗ್ಲೋಬಲ್, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಮಿಷನ್, ಜಲ್ ಜೀವನ್ ಮಿಷನ್ ಮುಂತಾದ ಕಾರ್ಯಕ್ರಮಗಳು ಒಂದು ಹಾರದ ಮುತ್ತುಗಳಿದ್ದಂತೆ. ಒಂದು ಮುತ್ತು ಕಡಿಮೆಯಾದರೂ, ಆ ಹಾರ ಸಂಪೂರ್ಣವಾಗದು ಎಂದು ಅವರು ಪ್ರತಿಪಾದಿಸಿದರು.
ಸ್ಥಿರತೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನದ ಅವಕಾಶ ನೀಡುವ ಗುರಿ, ಇವುಗಳ ಸಮ್ಮಿಲಿತ ಜೋಡಣೆಯೆ ಭಾರತದ ಬೆಳವಣಿಗೆಯ ಇಂದಿನ ಪಯಣವನ್ನು ವಿವರಿಸುತ್ತವೆ. ವಿಶ್ವದ 11ನೇ ಅತಿದೊಡ್ಡ ಜಿಡಿಪಿಯಿಂದ ಇಂದು (2025ರಲ್ಲಿಗೆ) 5ನೇ ಸ್ಥಾನಕ್ಕೇರಿದ ಭಾರತ, ಈ ವರ್ಷಾಂತ್ಯ ದೊಳಗೆ 4ನೇ ಸ್ಥಾನಕ್ಕೇರಲಿದೆ ಮತ್ತು 2027ರ ಹೊತ್ತಿಗೆ 3ನೇ ಅತಿದೊಡ್ಡ ಆರ್ಥಿಕತೆ ಆಗಬಹುದು ಎಂದು ಪ್ರಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಬಜೆಟ್ನಲ್ಲಿ ಆಳವಾದ ತಂತ್ರಜ್ಞಾನ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು 10 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿತ್ತು ಎಂದು ಗಮನ ಸೆಳೆದ ಅವರು, ನಾವೀನ್ಯತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಮತ್ತಷ್ಟು ಬೆಂಬಲಿಸಲು ಈಗ ಹೆಚ್ಚುವರಿಯಾಗಿ 10 ಸಾವಿರ ಕೋಟಿ ರೂ.ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವ ಸಂಪುಟ ಸಭೆಯು ಇತ್ತೀಚೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ 1 ಲಕ್ಷ ಕೋಟಿ ರೂ.ಅನುಮೋದಿಸಿದೆ. ತಾಂತ್ರಿಕ ನಾವೀನ್ಯತೆ ಹೆಚ್ಚಿಸಲು ಇದನ್ನು 50 ವರ್ಷಗಳಲ್ಲಿ ಶೂನ್ಯ ಬಡ್ಡಿದರದ ಸಾಲವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಭಾರತದ ಯುವಜನಾಂಗದ ಆಶಯಗಳು ಮತ್ತು ಇಚ್ಛೆಗಳು ಇಂದಿನ ವಿಶ್ವದೊಂದಿಗೆ ಹೋಲಿಸಿದರೆ ಹೆಚ್ಚು ಪ್ರಬಲವಾಗಿದೆ. ಇದು ನಾವೀನ್ಯತೆ, ಸಂಶೋಧನೆ, ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ, ತಂತ್ರಜ್ಞಾನ ಮತ್ತು ಭವಿಷ್ಯಯೋಗ್ಯ ಭಾರತವನ್ನು ರೂಪಿಸುತ್ತಿದೆ. ಎಐ, ಮೆಷಿನ್ ಕಲಿಕೆ, ದತ್ತಾಂಶಗಳ ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಪಿಯೂಷ್ ಗೋಯಲ್ ಹೇಳಿದರು.
ಕೋವಿಡ್ ಸಮಯದಲ್ಲಿ ಭಾರತ ಕಾರ್ಯಗಳನ್ನು ಉಲ್ಲೇಖಿಸಿದ ಅವರು, ನಾವು ಪ್ರತಿಯೊಂದು ವಿಷಮ ಪರಿಸ್ಥಿತಿಯನ್ನು ಅವಕಾಶವಾಗಿ ಕಾಣುತ್ತೇವೆ. ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ಗಳ ಕೊರತೆಯಾಗಿತ್ತು. ಆದರೆ, ಮೋದಿಯವರ ಮಾರ್ಗದರ್ಶನದಲ್ಲಿ ಡಿಆರ್ಡಿಒ, ಇಸ್ರೋ ಹಾಗೂ ಎಲ್ಲ ಕೈಗಾರಿಕೆಗಳು ಒಟ್ಟಾಗಿ ಕೆಲಸ ಮಾಡಿ, ಭಾರತವನ್ನು ಪಿಪಿಇ ಕಿಟ್ ಗಳ ಉತ್ಪಾದನೆಯಲ್ಲಿ ಎರಡನೇ ಅತಿದೊಡ್ಡ ದೇಶವನ್ನಾಗಿ ರೂಪಿಸಿದವು ಎಂದು ಹೇಳಿದರು.
ಅಷ್ಟೇ ಅಲ್ಲದೇ ನಾವು ಪಿಪಿಇ ಕಿಟ್ಗಳನ್ನು ಇತರ ದೇಶಗಳಿಗೂ ಸರಬರಾಜು ಮಾಡಿದೆವು. ಇದೇ ದಿಸೆಯಲ್ಲಿ ಭಾರತ 100 ಹಿಂದುಳಿದ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ಪೂರೈಸಿತು ಎಂದು ಹೇಳಿದ ಅವರು, ಅಮೃತ ಕಾಲದಲ್ಲಿ ತಾಯ್ನಾಡಿಗೆ ಸೇವೆ ಸಲ್ಲಿಸೋಣ, ಆತ್ಮನಿರ್ಭರ ಭಾರತ ನಿರ್ಮಿಸಿ, ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸೋಣ ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು.