ಮಾಧ್ಯಮಗಳಿಂದ ಆಡಳಿತದಲ್ಲಿ ಕ್ರಿಯಾಶೀಲತೆ ಸಾಧ್ಯ : ಸಭಾಪತಿ ಹೊರಟ್ಟಿ
ಪತ್ರಕರ್ತ ಚಂದರಗಿಗೆ ‘ಬಿ.ಆರ್.ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ

ಬೆಂಗಳೂರು : ಆಡಳಿತದಲ್ಲಿ ಕ್ರಿಯಾಶೀಲತೆ ತರುವಲ್ಲಿ ಮಾಧ್ಯಮ ಇಂದಿಗೂ ಪ್ರಬಲವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರತಿಪಾದಿಸಿದರು.
ಶನಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್(ಐಎಸ್ಎಂಆರ್) ಸಂಸ್ಥೆಯಿಂದ ಪತ್ರಕರ್ತ ವಿಜಯ್ಕುಮಾರ್ ಚಂದರಗಿ ಅವರಿಗೆ ‘ಬಿ.ಆರ್.ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ-2025’ ಪ್ರದಾನ ಮಾಡಿ ಅವರು ಮಾತನಾಡಿದರು.
ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ವ್ಯವಸ್ಥೆ ಬಗ್ಗೆ ಕೆಲವೊಮ್ಮೆ ವಿಮರ್ಶೆಗಳು ಬರಬಹುದು. ಆದರೆ, ಮಾಧ್ಯಮ ರಂಗ ಜಾಗೃತಧ್ವನಿಯಲ್ಲಿದ್ದು, ನಮ್ಮೆಲ್ಲರನ್ನೂ ಎಚ್ಚರದಿಂದ ಇಡಬೇಕಾದ ಅನಿವಾರ್ಯತೆ ಇದೆ ಎಂದು ಹೊರಟ್ಟಿ ತಿಳಿಸಿದರು.
ತಾವು ಶಿಕ್ಷಣ ಮಂತ್ರಿಯಾಗಿದ್ದ ವೇಳೆ ಶಿಕ್ಷಕರ ವರ್ಗಾವಣೆಯಲ್ಲಿ ಭ್ರಷ್ಟಾ ಚಾರಕ್ಕೆ ಕಡಿವಾಣ ಹಾಕಲು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಯಿತು. ಆಂಗ್ಲ ಪತ್ರಿಕೆಯೊಂದರಲ್ಲಿ ಬಂದ ವರದಿಯಿಂದಲೆ ಇದು ಸಾಧ್ಯವಾಯಿತು. ಇಲ್ಲದಿದ್ದರೆ ಅವೈಜ್ಞಾನಿಕ ವರ್ಗಾವಣೆ, ಭ್ರಷ್ಟಾಚಾರ ಮುಂದುವರಿಯುತ್ತಲೇ ಇತ್ತು ಎಂದು ಹೊರಟ್ಟಿ ಹೇಳಿದರು.
ಬೇರೆ ದೇಶಗಳಲ್ಲಿ ಆಡಳಿತಕ್ಕೆ ಬರುವ ಪಕ್ಷ ಹಿಂದಿನ ಸರಕಾರಗಳ ಯೋಜನೆಗಳ ದೋಷ ಸರಿಪಡಿಸಿ ಮುನ್ನಡೆಯುತ್ತವೆ. ಆದರೆ, ನಮ್ಮಲ್ಲಿ ಇಡೀ ಯೋಜನೆಯನ್ನು ಬದಲಿಸಲಾಗುತ್ತದೆ. ಇದರ ಬಗ್ಗೆ ಮಾಧ್ಯಮಗಳು ಗಮನ ಇಡಬೇಕು. ಪ್ರಜಾಪ್ರಭುತ್ವದಲ್ಲಿ ಶಿಸ್ತು ಪರಿಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಇನ್ನು, ವಿಶೇಷವಾಗಿ ಅರ್ಜಿ ಆಹ್ವಾನಿಸದೆ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿರುವುದು ಉತ್ತಮ ಕಾರ್ಯ ಎಂದು ಹೊರಟ್ಟಿ ಶ್ಲಾಘಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಮಾಧ್ಯಮಗಳು ಬೆಂಗಳೂರಿನಂತ ನಗರ ಕೇಂದ್ರಿತ ಸುದ್ದಿಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿವೆ. ಗ್ರಾಮೀಣ, ಉತ್ತರ ಕರ್ನಾಟಕ ಭಾಗದ ಸುದ್ದಿಗಳಿಗೆ ಹೆಚ್ಚು ಒತ್ತು ಕೊಡಬೇಕಾದ, ಸತ್ಯಾಸತ್ಯತೆ ಅರಿತು ವರದಿ ಮಾಡಬೇಕು ಎಂದರು.
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ಗಾಂಧೀಜಿ ಭಾರತದಲ್ಲಿ ಪತ್ರಿಕೋದ್ಯಮ ಬೆಳೆಸಿ ಅದನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಂಡ ಮಾಸ್ ಕಮ್ಯುನಿಕೇಟರ್. ಅನವಶ್ಯಕವಾಗಿ ಬಳಸಲ್ಪಡುವ ಶಬ್ದ ಕೂಡ ಹಿಂಸೆ ಎಂದು ಗಾಂಧೀಜಿ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಸೇರಿ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ಪತ್ರಿಕಾ ಕ್ಷೇತ್ರ ಧ್ವನಿಯೆತ್ತಿದೆ. ಅದರಂತೆ ಈಗಲೂ ಕಾರ್ಯ ನಿರ್ವಹಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಿ.ಎಸ್.ಸತೀಶ್ ಕುಮಾರ್, ಎಚ್.ಆರ್.ಶ್ರೀಶ, ಬಿ.ಆರ್.ರೋಹಿತ್ ಅವರ ಪಾಲಕರಾದ ಕೆ.ವಿ.ಲಲಿತಾ, ಸಿ.ರಾಜಣ್ಣ ಇದ್ದರು.