ಮುಖ್ಯಮಂತ್ರಿ ಬದಲಾವಣೆ ಖಚಿತ: ಪ್ರತಿಪಕ್ಷ ನಾಯಕ ಆರ್.ಅಶೋಕ್

ಬೆಂಗಳೂರು : ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಒಪ್ಪಂದ ಆಗಿದ್ದು, ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ಒಪ್ಪಂದ ಆಗಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಆರು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯನವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ಅವರಿಗೆ ಗೇಟ್ಪಾಸ್ ನೀಡುವುದು ಗ್ಯಾರಂಟಿಯಾಗಿದೆ ಎಂದು ಹೇಳಿದರು.
ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ. ಕಾಂಗ್ರೆಸ್ನ ಶಾಸಕರು ರಾಜಾರೋಷವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಿದ್ದರಾಮಯ್ಯನವರಿಗೆ ಬೋರ್ಡಿಂಗ್ ಪಾಸ್ ಇದ್ದಂತೆ ಎಂದ ಅವರು, ಸರಕಾರ ಎರಡೂವರೆ ವರ್ಷಗಳಲ್ಲಿ ಟೇಕಾಫ್ ಆಗಿಲ್ಲ. ಶಾಸಕರೆಲ್ಲರೂ ತಿರುಗುಬಿದ್ದಿದ್ದಾರೆ. ಶಾಸಕರು ಸಿದ್ದರಾಮಯ್ಯನವರ ಪರವಾಗಿಲ್ಲ ಎಂಬುದು ಸುರ್ಜೇವಾಲಾ ಸಭೆಯಿಂದ ಗೊತ್ತಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೇಂದ್ರಕ್ಕೆ ಹೋಗುವುದು ಗ್ಯಾರಂಟಿಯಾಗಿದೆ. ಇನ್ನೆರಡು ವರ್ಷವೂ ಇದೇ ರೀತಿ ಅತಂತ್ರದಲ್ಲೇ ಸರಕಾರ ನಡೆಯಲಿದೆ. ಖರ್ಗೆಯವರಿಗೆ ಸಿಎಂ ಸ್ಥಾನ ಹಲವಾರು ಬಾರಿ ತಪ್ಪಿದೆ. ಆದರೆ ಈಗ ಅವರಿಗೂ ಅವಕಾಶ ಬರಬಹುದು ಎಂದು ನುಡಿದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪಾಪರ್ ಸರಕಾರ ಎಂದು ಒಪ್ಪಿಕೊಂಡಿದ್ದಾರೆ. ಈ ಸರಕಾರದಿಂದ ಜನರ ಕೈಗೆ ಚಿಪ್ಪು ಸಿಗಲಿದೆ. ಸಿಎಂ ಬದಲಾವಣೆಯ ಗಲಾಟೆಯ ನಡುವೆ ಸಚಿವರು ಸ್ಥಾನ ಕಳೆದುಕೊಂಡು ತಿರುಗಿ ಬೀಳಲಿದ್ದಾರೆ. ಸಚಿವ ರಾಜಣ್ಣ ಹೇಳಿದಂತೆಯೇ, ಅಧಿಕಾರದ ಪ್ರಳಯ ಆಗಲಿದೆ ಎಂದು ಹೇಳಿದರು.