ದೇವನಹಳ್ಳಿ ರೈತ ಹೋರಾಟ | ರೈತರ ಪರ ನಿರ್ಧಾರ ತೆಗೆದುಕೊಳ್ಳದಿದ್ದರೆ ಸರಕಾರ ಪತನ : ಕಾರಳ್ಳಿ ಶ್ರೀನಿವಾಸ್

ಬೆಂಗಳೂರು : ದೇವನಹಳ್ಳಿ ಭಾಗದ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಜು.15ರ ವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಡುವು ಕೇಳಿದ್ದು, ರೈತರ ಪರವಾಗಿ ನಿರ್ಧಾರ ಬರದಿದ್ದರೆ ಸರಕಾರ ಪತನವಾಗಬಹುದು. ಈ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಭೂಮಿ ಕೊಡುವುದಾಗಿ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. 1,195 ದಿನಗಳ ಹೋರಾಟದ ಅಂತಿಮ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜು.15ರಂದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ, ದೇವನಹಳ್ಳಿಯ ಕೆಲವರು ತಾವು ಭೂಸ್ವಾಧೀನ ಪರವಾಗಿದ್ದೇವೆ ಎಂದು ಪತ್ರಿಕಾಗೋಷ್ಠಿ ನಡೆಸಿರುವುದು ನೈಜ ಹೋರಾಟಗಾರರ ಆತಂಕಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್ಸಿ-ಎಸ್ಟಿ ಸಮುದಾಯವು ಭೂಮಿ ಕೊಡಲು ತಯಾರಿದ್ದಾರೆ ಎಂದು ಜಮೀನು ಮಾರಾಟ ಮಾಡುವವರು ಮತ್ತು ದಲ್ಲಾಳಿಗಳು ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಹೊಲೆಯ, ಮಾದಿಗ ಮತ್ತು ಎಲ್ಲ ಹಿಂದುಳಿದ ಜಾತಿಯ ಶೇ.90ರಷ್ಟು ಜಮೀನು ಮಾಲಕರು ನಮ್ಮೊಡನಿದ್ದಾರೆ. ಅವರು ಯಾವುದೇ ಕಾರಣಕ್ಕೂ ಭೂಮಿ ಕೊಡಲು ಸಿದ್ಧರಿಲ್ಲ. ಸ್ವಾಧೀನಪಡಿಸಿಕೊಳ್ಳಲು ನಿಗದಿ ಮಾಡಿರುವ ಭೂ ಪ್ರದೇಶವನ್ನು ‘ಹಸಿರು ವಲಯ’ವನ್ನಾಗಿ ಮಾಡಲಾಗುವುದು ಎಂದು ಹೇಳಿ ಇವರು ಜನರಲ್ಲಿ ಭಯ ಬಿತ್ತುತ್ತಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕೆಯೊಂದರ ಊಹಾತ್ಮಕ ಸುದ್ದಿಯನ್ನೇ ಸರಕಾರದ ಆದೇಶ ಎಂದು ನಂಬಿಸುತ್ತಿದ್ದಾರೆ. ಜಮೀನು ಮಾರಾಟ ಮಾಡುವುದಿಲ್ಲ ಎಂಬ ಕಾರಣಕ್ಕಾಗಿಯೇ ರೈತರು ಇಷ್ಟು ದಿನದಿಂದ ಹೋರಾಟ ನಡೆಸುತ್ತಿರುವುದು. ಆದುದರಿಂದ, ಹೊಲವನ್ನು ಉತ್ತಿ-ಬಿತ್ತಿ, ಅನ್ನ ಬೆಳೆಯುವ ರೈತರಿಗೆ ‘ಹಸಿರು ವಲಯ’ವೇ ಬೇಕು. ದಲ್ಲಾಳಿಗಳು ಮಾತ್ರ ‘ಹಳದಿ ವಲಯ’ ಕೇಳುತ್ತಿದ್ದಾರೆ ಎಂದು ಕಾರಳ್ಳಿ ಶ್ರೀನಿವಾಸ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೀಮಾಚನಹಳ್ಳಿ ಲಕ್ಷ್ಮಿ, ರೈತರಾದ ಬಿಂದು, ವಿನಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







