ಧರ್ಮಸ್ಥಳ ದೂರು | ನಿಷ್ಪಕ್ಷ ತನಿಖೆಗೆ ಆಗ್ರಹಿಸಿ ಎಐಎಂಎಸ್ಎಸ್ ನಿಂದ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ದ.ಕ. ಜಿಲ್ಲೆಯ ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಕೊಲೆ, ಅತ್ಯಾಚಾರ ಆಘಾತಕಾರಿ ಪ್ರಕರಣಗಳ ಕುರಿತು ನಿಷ್ಪಕ್ಷ ತನಿಖೆಗೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್)ಯ ಬೆಂಗಳೂರು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ಅನೇಕ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು, ಘೋರ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲುಕಿ ಜನತೆಯಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿವೆ. ಅತ್ಯಾಚಾರಕ್ಕೊಳಗಾದ ನೂರಕ್ಕೂ ಹೆಚ್ಚು ಶಾಲಾ ಬಾಲಕಿಯರ, ಮಹಿಳೆಯರ ಮೃತದೇಹಗಳನ್ನು 1995ರಿಂದ 2014ರ ನಡುವೆ ಅಲ್ಲಿ ಸುತ್ತಮುತ್ತ ಹೂತಿದ್ದೇನೆ ಎಂದು ಧರ್ಮಸ್ಥಳದ ಮಾಜಿ ಸ್ವಚ್ಛತಾ ಕಾರ್ಮಿಕ ಎನ್ನಲಾದ ವ್ಯಕ್ತಿಯ ದೂರನ್ನು ಆಧರಿಸಿ ಎಫ್.ಐ.ಆರ್. ದಾಖಲಾಗಿದೆ. ಅವರು ಹೂತಿರುವ ಬಹುಪಾಲು ಮೃತದೇಹಗಳು ಬಾಲಕಿಯರು ಮತ್ತು ಮಹಿಳೆಯರದ್ದು ಎಂಬುದು ಬಹಳ ಅಘಾತಕಾರಿ ವಿಷಯವಾಗಿದೆ. 2010ರಲ್ಲಿ ಆತ ಶಾಲಾ ಬ್ಯಾಗ್ ಸಮೇತ ಹೂತಿದ್ದ ಸುಮಾರು 12 ವರ್ಷದ ಬಾಲಕಿಯ ಮೃತದೇಹದ ನೆನಪು ಆತನಿಗೆ ನಿದ್ರಿಸಲು ಕೊಡದೆ ಈ ಎಲ್ಲಾ ವಿಷಯಗಳನ್ನು ಬಹಿರಂಗ ಪಡಿಸಲು ಪ್ರೇರೇಪಿಸಿರುವುದಾಗಿ ಆತ ಹೇಳಿಕೊಂಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅಲ್ಲದೆ ಈ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿವೆ. ಅಷ್ಟೇ ಅಲ್ಲದೆ, ಈ ಪ್ರಕರಣಗಳ ವಿರುದ್ಧ ಹಲವಾರು ವರ್ಷಗಳಿಂದ ಪ್ರತಿರೋಧಗಳು, ಹೋರಾಟಗಳು ನಡೆಯುತ್ತಲೇ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರ ಇತ್ತೀಚೆಗಷ್ಟೆ ಈ ನೂರಾರು ಮೃತದೇಹಗಳ ಸಮಾಧಿ ಪ್ರಕರಣಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷ ತನಿಖೆ ನಡೆಸಲು (ಎಸ್.ಐ.ಟಿ.) ವಿಶೇಷ ತನಿಖಾ ದಳವನ್ನು ನೇಮಿಸಿದೆ. ಈ ಪ್ರಕ್ಷಬ್ದ ಪರಿಸ್ಥಿತಿಯಲ್ಲಿ ಶೀಘ್ರವಾಗಿ ಈ ನೂರಾರು ಸಾವುಗಳ ಕುರಿತು ಸಮಗ್ರ ನಿಷ್ಪಕ್ಷ ತನಿಖೆ ನಡೆಯಬೇಕು. ಯಾರೇ ತಪ್ಪಿತಸ್ಥರು, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಎಷ್ಟೇ ಪ್ರಭಾವಿ ವಲಯದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಾಗೂ ಎಲ್ಲಾ ಸಾಕ್ಷಿಗಳಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ನೀಡಬೇಕು. ಆತಂಕ, ನೋವು, ಆಕ್ರೋಶದಲ್ಲಿರುವ ಜನತೆಗೆ ಭರವಸೆ ನೀಡಬೇಕೆಂದು ಆಗ್ರಹಿಸಿ ಎಐಎಂಎಸ್ಎಸ್ ಬೆಂಗಳೂರು ಜಿಲ್ಲಾ ಸಮಿತಿಯು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಬಿ. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಎಐಎಂಎಸ್ಎಸ್ ಬೆಂಗಳೂರು ಜಿಲ್ಲಾ ಅಧ್ಯಕ್ಷೆ ಹೇಮಾವತಿ ಕೆ. ಜಿಲ್ಲಾ ಕಾರ್ಯದರ್ಶಿ ನಿರ್ಮಲಾ ಎಚ್. ಎಲ್., ಉಪಾಧ್ಯಕ್ಷೆ ಅನುರಾಧಾ ವಿ. ಆರ್ , ಕಾರ್ಯಕಾರಿ ಸಮಿತಿ ಸದಸ್ಯೆ ವೈಷ್ಣವಿ, ಹಾಗೂ ಸ್ಥಳೀಯರಾದ ವಿಮಲಾ, ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.







