ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | ಬಜೆಟ್ ಘೋಷಣೆಯಂತೆ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭ: ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : 2024-25ನೇ ಸಾಲಿನ ಬಜೆಟ್ ಘೋಷಣೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತ್ಗಳ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಕೈಗೊಳ್ಳುವ ಪ್ರಕ್ರಿಯೆಯನ್ನು ಜು.22ರಂದು ಆರಂಭಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೌನ್ಸೆಲಿಂಗ್ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ನೌಕರರಿಗೆ ಆನ್ಲೈನ್ ಮೂಲಕ ತಮ್ಮ ಆದ್ಯತೆಯ ಸ್ಥಳಗಳನ್ನು ಆಯ್ಕೆ ಮಾಡುವ ಅವಕಾಶ ಇರಲಿದೆ. ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ನೌಕರರು ವರ್ಗಾವಣೆಗೆ ಅರ್ಹರಾಗಿದ್ದು, ವಿಶೇಷಚೇತನರು ಹಾಗೂ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಿಯಮಗಳಲ್ಲಿ ವಿನಾಯತಿ ನೀಡಲಾಗಿದೆ. 31 ಜಿಲ್ಲೆಗಳಿಂದ ಒಟ್ಟು 2,697 ನೌಕರರು ವರ್ಗಾವಣೆಗಾಗಿ ಅರ್ಜಿಗಳು ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನೌಕರರು ಸಲ್ಲಿಸಿದ ಅರ್ಜಿ, ಸ್ಥಳದ ಆಯ್ಕೆಗಳನ್ನು ಪರಿಗಣಿಸಿ ಆನ್ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಿ ಜಿಲ್ಲಾ ಪಂಚಾಯತ್ ಹಂತದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ವಿಶೇಷ ಪ್ರಕರಣಗಳ ಕೌನ್ಸಿಲಿಂಗ್ ಜು.24ರಂದು, ಎರಡನೇಯ ಹಂತದಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಮತ್ತು ಕಡ್ಡಾಯ ವರ್ಗಾವಣೆ ಪ್ರಕರಣಗಳ ಕೌನ್ಸಿಲಿಂಗ್ ಜು.25ರಂದು ನಡೆಯಲಿದೆ. ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಜು.28ರಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಅಂತರ್ಜಿಲ್ಲೆ ವರ್ಗಾವಣೆಗೆ ಅರ್ಹರಿರುವ ನೌಕರರ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ವರ್ಗಾವಣೆ ಆದೇಶ ನೀಡುವ ಮೂಲಕ ಚಾಲನೆ ನೀಡಿದರು.







