ರಾಜ್ಯದ ಆಡಳಿತ ಕಾಂಗ್ರೆಸ್ ಹೈಕಮಾಂಡ್ ನಿವಾಸದಿಂದ ನಡೆಯುತ್ತಿದೆ : ವಿಜಯೇಂದ್ರ

ಬೆಂಗಳೂರು : ಕರ್ನಾಟಕದ ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲ್ಲ, ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ನಿವಾಸದಿಂದ ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ದಿಲ್ಲಿಗೆ ಹೋಗಿ ರಾಹುಲ್ ಗಾಂಧಿ ಅವರ ಆದೇಶ ಪಡೆದು ಅಲ್ಲಿಂದಲೆ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂಕುಶ ಹಾಕಿದಂತಿರುವ ಹೈಕಮಾಂಡ್ (ಉದಾಹರಣೆಗೆ ಕಾಂತರಾಜು ಆಯೋಗದ ವರದಿ ತಿರಸ್ಕಾರ) ಪಕ್ಷದ ಉಸ್ತುವಾರಿ ಸುರ್ಜೆವಾಲಾ ಅವರನ್ನು ಸರಕಾರದ ಆಡಳಿತವನ್ನು ನಿಯಂತ್ರಿಸುವ ರಾಯಭಾರಿಯನ್ನಾಗಿ ನೇಮಿಸಿದಂತಿದೆ ಎಂದು ಟೀಕಿಸಿದ್ದಾರೆ.
ಅದರ ಸಾಕ್ಷಿಯಾಗಿ ಸುರ್ಜೆವಾಲಾ ಸರಕಾರಿ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸುತ್ತಿರುವುದೆ ಸಾಕ್ಷಿಯಾಗಿದೆ. ಈ ಸಂಬಂಧ ಅನೇಕ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು ಸಚಿವ ಕೆ.ಎನ್.ರಾಜಣ್ಣ ಅವರು ಬಹಿರಂಗವಾಗಿಯೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ದೇಶದಲ್ಲಿ ಬಹುತೇಕ ಅಸ್ಥಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ರಾಜ್ಯ ಒಂದೇ ಆಧಾರಸ್ತಂಭವಾಗಿದೆ, ನೆಹರು ಕುಟುಂಬಕ್ಕೆ ಎಟಿಎಂ ಕೇಂದ್ರವಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವಿನ ಭರವಸೆ ಪಡೆದುಕೊಂಡ ಸಂಕಷ್ಟಿತ ರೋಗಿಗಳ ಚಿಕಿತ್ಸೆಗೂ ಹಣ ಜಮೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುವಷ್ಟರ ಮಟ್ಟಿಗೆ ಸರಕಾರದ ಆರ್ಥಿಕ ಸ್ಥಿತಿ ದಿವಾಳಿಯ ಹಂತ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆಯ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.
ಆಂತರಿಕ ಕಲಹದಲ್ಲಿ ರಾಜ್ಯದ ಆಡಳಿತ ಯಂತ್ರ ಈಗಾಗಲೇ ನಿಂತ ನೀರಾಗಿದ್ದರೆ, ಸುರ್ಜೆವಾಲಾ ಅವರು ತಳಕಚ್ಚಿರುವ ಬಾವಿಯಲ್ಲೆ ನೀರು ಸೇದುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವಿನ ಶೀತಲ ಸಮರ, ದಿಲ್ಲಿಯ ಅವರ ಇಬ್ಬರು ಅತ್ಯಾಪ್ತ ಸಿಬ್ಬಂದಿಗಳವರೆಗೂ ವ್ಯಾಪಿಸಿದೆ. ಕರ್ನಾಟಕದ ಆಡಳಿತವನ್ನು ದೇವರೆ ಬಂದು ಸರಿದೂಗಿಸಬೇಕಾದ ಸ್ತಿತಿ ಬಂದೊದಗಿದೆ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.







