ಬಿಜೆಪಿಯವರ ಹೋರಾಟ ಹಾಸ್ಯಾಸ್ಪದ : ಸಚಿವ ಡಾ.ಮಹದೇವಪ್ಪ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಸಮುದಾಯದ ಜನರ ಅನುದಾನ ಬಳಕೆಯ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಹೋರಾಟ ನಡೆಸುವುದಾಗಿ ಹೇಳಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯ ನಿಯಮಾವಳಿಗೆ ಅನುಗುಣವಾಗಿ ಕಾಂಗ್ರೆಸ್ ಸರಕಾರವು ಪರಿಶಿಷ್ಟ ಸಮುದಾಯದ ಜನರ ಕನಿಷ್ಟ ಬದುಕಿನ ಭದ್ರತೆಗಾಗಿ ಪಂಚ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಅವರಿಗೆ ಭರವಸೆಯನ್ನು ಕಲ್ಪಿಸುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಸರಕಾರದ ಈ ದೂರದೃಷ್ಟಿಯ ಫಲವಾಗಿಯೆ ಇಂದು ತಲಾದಾಯದಲ್ಲಿ ಕರ್ನಾಟಕವು ದೇಶದಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕೆಲವು ಸಾಮಾಜಿಕ ತಜ್ಞರ ಅಭಿಪ್ರಾಯದಂತೆ ಸದಾ ಶೊಷಣೆಗೆ ಒಳಗಾಗಿ ತೊಂದರೆ ಅನುಭವಿಸುತ್ತಿದ್ದ ಪರಿಶಿಷ್ಟ ಸಮುದಾಯಗಳ ಪ್ರಾಥಮಿಕ ಬದುಕಿನಲ್ಲೂ ಕೂಡಾ ಸಾಕಷ್ಟು ಸುಧಾರಣೆಗಳು ಆಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಹೀಗಿರುವಾಗ ನಿಯಮಾವಳಿಗಳ ಅನುಸಾರ ಪರಿಶಿಷ್ಟ ಸಮುದಾಯಗಳ ಬದುಕು ಹಸನಾಗುವ ಉದ್ದೇಶದಿಂದ ಹಣ ಖರ್ಚು ಮಾಡಿದರೆ ಅದಕ್ಕೂ ಅಪಸ್ವರ ತೆಗೆಯುವ ಬಿಜೆಪಿಯವರು ನೈತಿಕವಾಗಿ ಎಷ್ಟು ದಿವಾಳಿ ಆಗಿದ್ದಾರೆ ಮತ್ತು ಎಷ್ಟೊಂದು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಅವರ ಈ ನಡವಳಿಕೆಯೆ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.
ಈ ಹಿಂದಿನ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗರು ಪರಿಶಿಷ್ಟ ಸಮುದಾಯಗಳ ವಿರೋಧಿಯಾದ ನಡವಳಿಕೆಯನ್ನೆ ತೋರಿದರು. ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯ ಪರಿಮಿತಿಯಿಂದ ಆಚೆಗೆ ನಿಯಮಕ್ಕೆ ವಿರುದ್ಧವಾಗಿ ಎಸ್ಸಿಎಸ್ಪಿ ಯೋಜನೆಯನ್ನು ಬಳಸಿದ್ದ ಇವರು, ಒಳ ಮೀಸಲಾತಿಯ ಪ್ರಸ್ತಾವವನ್ನು ಅಪ್ಪಿ ತಪ್ಪಿಯೂ ಸದನದಲ್ಲಿ ಮಾತನಾಡಲಿಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ.
ಈಗ ದೊಡ್ಡದಾಗಿ ಭಾಷಣ ಮಾಡುತ್ತಿರುವ ಬಿಜೆಪಿಯ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸಂಸತ್ ನಲ್ಲೇ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಬರುವುದಿಲ್ಲ ಎಂದಿದ್ದರು. ಇನ್ನು ಸಚಿವ ಗೋವಿಂದ ಕಾರಜೋಳ ಅವರು ಸದಾಶಿವ ಆಯೋಗದ ವರದಿ ಒಂದು ಮುಗಿದ ಅಧ್ಯಾಯ ಎಂದಿದ್ದರು ಎಂದು ಅವರು ತಿಳಿಸಿದ್ದಾರೆ.
ಅಧಿಕಾರ ಇದ್ದಾಗ ಇಂತಹ ಬೇಜವಾಬ್ದಾರಿ ಮಾತುಗಳನ್ನು ಆಡಿ ಈಗ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡುವ ಬದ್ಧತೆಯನ್ನು ತೋರಿಸುತ್ತಿರುವ ನಮ್ಮ ಸರಕಾರದ ವಿರುದ್ಧ ಬಿಜೆಪಿಯವರು ಮಾಡುತ್ತಿರುವ ಟೀಕೆಯು ಬೇಜವಾಬ್ದಾರಿತನದ ಸಂಕೇತವಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಇನ್ನು ಕೇಂದ್ರ ಸರಕಾರದ ಭಾಗವಾಗಿದ್ದ ಎ.ನಾರಾಯಣಸ್ವಾಮಿ ಮತ್ತು ಗೋವಿಂದ ಕಾರಜೋಳ ಆಡಿದ ಮಾತುಗಳು ಕೇವಲ ಅವರ ಮಾತಾಗಿರದೆ ಅದು ಬಿಜೆಪಿಯ ಮಾತಿನ ಕನ್ನಡಿಯಾಗಿತ್ತು. ಹೀಗಿರುವಾಗ ಮೂಲತಃ ಬಡವರ ವಿರೋಧಿಗಳು ಮತ್ತು ಶೋಷಿತ ಸಮುದಾಯಗಳ ವಿರೋಧಿಗಳಾದ ಬಿಜೆಪಿಗರು ತಮ್ಮ ಜನ ವಿರೋಧಿ ಮನಸ್ಥಿತಿಗಾಗಿ ಜನ ಸಾಮಾನ್ಯರಲ್ಲಿ ಎಷ್ಟು ಬಾರಿ ಕ್ಷಮೆ ಕೇಳಿದರೂ ಸಾಲದು ಎಂದು ಮಹದೇವಪ್ಪ ಕಿಡಿಗಾರಿದ್ದಾರೆ.
ನ್ಯಾಯದ ಸಾಕಾರಕ್ಕಾಗಿ ಕೆಲಸ ಮಾಡುತ್ತಿರುವ ನಮ್ಮ ಸರಕಾರದ ಬದ್ಧತೆಯು ಹೆಚ್ಚು ಸ್ಪಷ್ಟತೆಯಿಂದ ಕೂಡಿದ್ದು ಬಡವರು ಮತ್ತು ಶೋಷಿತರ ಪರವಾದ ನಿರ್ಧಾರಗಳಲ್ಲಿ ಯಾವುದೇ ರಾಜಿಯಿಲ್ಲದೇ ಕೆಲಸ ಮಾಡುತ್ತದೆ ಎಂದು ಈ ಸಂದರ್ಭದಲ್ಲಿ ಗರ್ವದಿಂದ ಹೇಳಲು ಬಯಸುತ್ತೇನೆ ಎಂದು ಮಹದೇವಪ್ಪ ತಿಳಿಸಿದ್ದಾರೆ.







