ಬುಡಕಟ್ಟು ಪರಂಪರೆಯನ್ನು ಅಭಿವೃದ್ಧಿಯ ಕೇಂದ್ರಕ್ಕೆ ತರುವುದು ಅವಶ್ಯಕ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು : ಬುಡಕಟ್ಟು ಸಾಂಸ್ಕೃತಿಕ ಪರಂಪರೆಯನ್ನು ಕೇವಲ ವಸ್ತುಸಂಗ್ರಹಾಲಯಗಳಿಗೆ ಸೀಮಿತಗೊಳಿಸುವ ಬದಲು ಶಿಕ್ಷಣ, ನೀತಿ ನಿರೂಪಣೆ ಮತ್ತು ಸಾಮಾಜಿಕ ಅಭಿವೃದ್ಧಿಯ ಕೇಂದ್ರಕ್ಕೆ ತರುವುದು ಅವಶ್ಯಕ. ಬುಡಕಟ್ಟು ಜ್ಞಾನ ವ್ಯವಸ್ಥೆಯು ನಮಗೆ ಕೇವಲ ಭೂತಕಾಲದ ನೆನಪಲ್ಲ, ಬದಲಾಗಿ ಭವಿಷ್ಯದ ದಿಕ್ಕಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಬುಧವಾರ ನಗರದ ಮೌಂಟ್ ಕಾರ್ಮೆಲ್ ಕಾಲೇಜುನಲ್ಲಿ ಹಮ್ಮಿಕೊಂಡಿದ್ದ ಬಿರ್ಸಾ ಮುಂಡಾ ಜನ್ಮ ದಿನಾಚರಣೆ ಮತ್ತು ‘ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳು’ ಕುರಿತು ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ 700ಕ್ಕೂ ಹೆಚ್ಚು ಗುರುತಿಸಲ್ಪಟ್ಟ ಬುಡಕಟ್ಟು ಜನಾಂಗಗಳಿವೆ. ಈ ಸಮುದಾಯಗಳ ಸಂಸ್ಕೃತಿ, ಭಾಷೆಗಳು, ಹಾಡುಗಳು, ನೃತ್ಯಗಳು, ಜಾನಪದ ಕಥೆಗಳು, ಸಾಮಾಜಿಕ ವ್ಯವಸ್ಥೆಗಳು ಮತ್ತು ಜೀವನಶೈಲಿಗಳು ವೈವಿಧ್ಯಮಯ ಭಾರತದ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಮತ್ತು ಮಾನವ ನಾಗರಿಕತೆಯ ಅತ್ಯಂತ ಪ್ರಾಚೀನ ಜ್ಞಾನದ ವಾಹಕಗಳಾಗಿವೆ ಎಂದರು.
ಬಿರ್ಸಾ ಮುಂಡಾ ನೀರು, ಅರಣ್ಯ ಮತ್ತು ಭೂಮಿಯ ರಕ್ಷಕ. ಭಾರತೀಯ ಬುಡಕಟ್ಟು ಸಮಾಜಕ್ಕೆ ಸ್ವಾಭಿಮಾನ, ಸಂಘಟಿತ ಪ್ರತಿರೋಧ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಮಾರ್ಗವನ್ನು ತೋರಿಸಿದವರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿ, ಬುಡಕಟ್ಟು ಸಮಾಜದ ಸ್ವಾಭಿಮಾನವನ್ನು ಪುನಃಸ್ಥಾಪಿಸಿದರು. ಅವರ ನೇತೃತ್ವದ ‘ಉಲ್ಗುಲಾನ್’ ಕ್ರಾಂತಿಯು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಳುವಳಿಯೂ ಆಗಿತ್ತು. ಅವರು ಸಾಂಸ್ಕೃತಿಕ ಸ್ವರಾಜ್ಯದ ಪ್ರವರ್ತಕರಾಗಿದ್ದರು. ಭಾರತದ ಬುಡಕಟ್ಟು ಸಂಪ್ರದಾಯಗಳು, ಭಾಷೆ, ನಂಬಿಕೆ ಮತ್ತು ಜೀವನಶೈಲಿಯನ್ನು ಉಳಿಸಲು ಹೋರಾಡಿದವರು ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಐಸಿಎಸ್ಎಸ್ಆರ್ನ ಸದಸ್ಯ ಕಾರ್ಯದರ್ಶಿ ಧನಂಜಯ್ ಸಿಂಗ್, ಬೆಂಗಳೂರು ವಿವಿ ಕುಲಪತಿ ಡಾ.ಜಯಕರ ಶೆಟ್ಟಿ, ನಗರ ವಿವಿ ಹಂಗಾಮಿ ಕುಲಪತಿ ಪ್ರೊ.ಕೆ.ಆರ್.ಜಲಜಾ, ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಸುಪೀರಿಯರ್ ಸಿಸ್ಟರ್ ಫ್ರಿಡೋಲಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.







