ಸಚಿವ ಶರಣಬಸಪ್ಪ ದರ್ಶನಾಪುರ ವಜಾಕ್ಕೆ ದಲಿತ ಸೇನೆ ಆಗ್ರಹ

ಬೆಂಗಳೂರು : ‘ಸರಕಾರಿ ಭೂಮಿ ಒತ್ತುವರಿ, ದಲಿತರಿಗೆ ಮೀಸಲಿಟ್ಟ ಹಣ ದುರುಪಯೋಗ ಆರೋಪದಲ್ಲಿ ಸಿಲುಕಿರುವ ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಅಲ್ಲದೆ, ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಎಂದು ದಲಿತ ಸೇನೆ ಅಧ್ಯಕ್ಷ ಹನುಮಂತ ಜಿ.ಯಳಸಂಗಿ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಸರಕಾರಿ ಕಚೇರಿಗಳು ಮತ್ತು ಶಾಲೆಗಳು ಖಾಸಗಿ ಜಾಗಗಳಲ್ಲಿವೆ. ಸಚಿವ ದರ್ಶನಾಪುರ ಮತ್ತವರ ಕುಟುಂಬದವರು ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡು, ಅದೇ ಜಾಗಗಳನ್ನು ವಿವಿಧ ಇಲಾಖೆಗಳಿಗೆ ಬಾಡಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಡವರಿಗೆ ಮೀಸಲಿಟ್ಟ 2 ಎಕರೆ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿದ್ದಲ್ಲದೆ, ಸದರಿ ಜಮೀನಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ತಾವೇ ಮಾಲಕರೆಂದು ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಚಿವರನ್ನು ಜನರು ಪ್ರಶ್ನೆ ಮಾಡಲಾಗದಂತಹ ಸ್ಥಿತಿ ಸೃಷ್ಟಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ವರ್ಗಗಳ ಸಮಗ್ರ ಅಭಿವೃದ್ಧಿ ಯೋಜನೆಯ ಸರ್ವೆ ನಂ.826ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಪಡೆದಿದ್ದು, ಅಲ್ಲಿನ ಎಲ್ಲ ಉದ್ಯಾನವನಗಳ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹನುಮಂತ ದೂರಿದರು.
ಕೊರಚ ಮತ್ತು ಕೊರಮ ಸಮುದಾಯದವರಿಗೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಮುಡಾ ಹಗರಣಕ್ಕಿಂತ ದೊಡ್ಡಮಟ್ಟದಲ್ಲಿ ಇಲ್ಲಿ ಅಕ್ರಮ ನಡೆಯುತ್ತಿದ್ದು, ಸಚಿವರ ಕುಟುಂಬದವರು ಗೂಂಡಾಗಿರಿ ಮಾಡುತ್ತಿದ್ದಾರೆ. ಪರಿಶಿಷ್ಟರ ಕಲ್ಯಾಣ ಯೋಜನೆ ಹೆಸರಿನಲ್ಲಿ ಹಣವನ್ನು ಕಬಳಿಸಿರುವ ದರ್ಶನಾಪುರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹನುಮಂತ ಯಳಸಂಗಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇನೆಯ ಉಪಾಧ್ಯಕ್ಷರಾದ ಎಂ.ಎ.ಸಿಂದಗಿಕರ್, ಶಾಂತಪ್ಪ ಬಿ.ಸಾಲಿಮನಿ, ಝಾವ್ಹೇದ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







