ವೀರಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ : ಡಾ.ಜಿ.ಪರಮೇಶ್ವರ್

ಬೆಂಗಳೂರು : ವೀರಯೋಧರು ತಮ್ಮ ಪ್ರಾಣ, ತ್ಯಾಗದ ಮೂಲಕ ಯಾವುದೇ ಜಾತಿ ಭೇದ-ಭಾವವಿಲ್ಲದೇ ಹಗಲಿರುಳು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ರಾಜಭವನ(ಲೋಕಭವನ) ಗಾಜಿನ ಮನೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಧರು ತಮ್ಮ ಕರ್ತವ್ಯ ನಿಷ್ಠೆ, ಶಿಸ್ತು ಮತ್ತು ಪ್ರಾಮಾಣಿಕತೆಗಾಗಿ ಹೆಸರು ಗಳಿಸಿದ್ದು, ಪ್ರಕೃತಿಯ ತೀವ್ರ ವಿಕೋಪ ಹಾಗೂ ಕಠಿಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿ ದೇಶದ ಉನ್ನತಿಗೆ ಕಾರಣರಾಗಿದ್ದಾರೆ ಎಂದರು.
ನಮ್ಮ ದೇಶದ ಯೋಧರು ಹೊರಗಿನ ಅಕ್ರಮಣ ಹಾಗೂ ಅಂತರಿಕ ವಿಪತ್ತಿನಲ್ಲಿ ದೇಶವನ್ನು ಕಾಪಾಡುವಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ಸೈನಿಕರ ಕುಟುಂಬದ ಸುರಕ್ಷತೆಯನ್ನು ಕಾಪಾಡುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಬದ್ಧ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಬಲಿಷ್ಠ ರಕ್ಷಣಾ ಪಡೆಯನ್ನು ನಿರ್ಮಿಸಲು ಸಮರ್ಪಿತ ಮತ್ತು ಪ್ರೇರಿತ ಯುವಕರ ಅಗತ್ಯವಿದೆ. ಯುವಕರಲ್ಲಿ ಸಶಸ್ತ್ರ ಪಡೆಗಳ ಘನತೆ ಹಾಗೂ ಗೌರವದ ಬಗ್ಗೆ ಅರಿವು ಮೂಡಿಸುವುದಲ್ಲದೇ, ಸೈನ್ಯ ಪಡೆಗಳಲ್ಲಿ ಸೇರಲು ಪ್ರೇರೆಪಿಸುವ ಜವಾಬ್ದಾರಿಯೂ ನಮ್ಮ ಹೊಣೆಯಾಗಿರುತ್ತದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಹುತಾತ್ಮ ಯೋಧರನ್ನು ಗೌರವಿಸಲು ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ಮಿಸಿ, 75 ಅಡಿ ಎತ್ತರದ ವೀರಗಲ್ಲನ್ನು ಕಾರ್ಗಿಲ್ ವಿಜಯ ದಿನದಂದು ಲೋಕಾರ್ಪಣೆ ಮಾಡಲಾಗಿದೆ. ಮಾಜಿ ಸೈನಿಕರ ಇತರೆ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಒಟ್ಟು 5 ಕೋಟಿ ರೂ.ಗಳನ್ನು ಹಿಂದಿನ ವರ್ಷದಲ್ಲಿ ಖರ್ಚು ಮಾಡಲಾಗಿದೆ ಎಂದು ಡಾ.ಜಿ. ಪರಮೇಶ್ವರ್ ವಿವರಿಸಿದರು.
ಶೌರ್ಯ ಪ್ರಶಸ್ತಿ ವಿಜೇತರಿಗೆ 1.5 ಕೋಟಿ ರೂ.ಗಳವರೆಗೆ ಅನುದಾನ ನೀಡುತ್ತಿರುವ ಕೆಲವೇ ಕೆಲವು ರಾಜ್ಯಗಳ ಸಾಲಿನಲ್ಲಿ ನಮ್ಮ ರಾಜ್ಯವಿದೆ. ಹಲವಾರು ದಂಡನಾಯಕರನ್ನು ನೀಡಿರುವ ಈ ನಾಡಿನ ವೀರಯೋಧರ ಏಳಿಗೆಗಾಗಿ ನಮ್ಮ ಸರಕಾರವು ಕಟಿಬದ್ಧವಾಗಿದೆ. ಮಾಜಿ ಸೈನಿಕರಿಗೆ ಎಲ್ಲ ವೃಂದಗಳ ಸರಕಾರಿ ನೌಕರಿಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುತ್ತಿರುವ ಏಕೈಕ ರಾಜ್ಯ ನಮ್ಮದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ವಿ.ಶರತ್ ಚಂದ್ರ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ನಿರ್ದೇಶಕ ಫ್ಲೈಟ್ ಲೆಫ್ಟಿನೆಂಟ್ ಎಂ.ಎಸ್. ಲೋಲಾಕ್ಷ, ಕೆ.ಎನ್. ಸಂತೋಷ್ ಸೇರಿದಂತೆ ವಾಯುಸೇನೆ, ನೌಕಾಸೇನೆ, ರಕ್ಷಣಾ ಪಡೆಯ ಅಧಿಕಾರಿಗಳು, ಸಿಬ್ಬಂದಿ, ಮಾಜಿ ಸೈನಿಕರು ಉಪಸ್ಥಿತರಿದ್ದರು.
ಯುದ್ಧ ಕಾರ್ಯಾಚರಣೆಯಲ್ಲಿ ಮಡಿದ ವೀರಯೋಧರ ಕುಟುಂಬಕ್ಕೆ ಗಾಯಗೊಂಡ ಯೋಧರಿಗೆ ರಾಜ್ಯ ಸರಕಾರದಿಂದ 50 ಲಕ್ಷ ರೂ.ಗಳ ಅನುದಾನ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಉಚಿತ ನಿವೇಶನ, ಮನೆ ನಿರ್ಮಾಣ ಮಾಡಲು ಸಹಾಯಧನ, ಮಾಜಿ ಸೈನಿಕರ ಮೀಸಲಾತಿಯಡಿ ಸರಕಾರಿ ಉದ್ಯೋಗ ಸೇರಿದಂತೆ ಹಲವು ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಹಾಗೆಯೇ ಸರಕಾರವು ಮಾಜಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಅಂತಹ ಸಮಸ್ಯೆಗಳನ್ನು ಬಗೆಹರಿಸಲಿದೆ.
- ಡಾ.ಜಿ. ಪರಮೇಶ್ವರ್, ಗೃಹ ಸಚಿವ







