ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕುಣಿಗಲ್ಗೆ ಮಾತ್ರ : ಪರಮೇಶ್ವರ್
"ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆ: ಶಾಸಕರ ಸಹಿತ 18 ಮಂದಿ ವಿರುದ್ಧ ಎಫ್ಐಆರ್"

ತುಮಕೂರು : ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕುಣಿಗಲ್ಗೆ ಮಾತ್ರ ಸೀಮಿತವಾಗಿದ್ದು, ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಯಲ್ಲ. ಜಿಲ್ಲೆಯ ಹಿತ ಕಾಪಾಡಲು ನಾನು ಬದ್ಧನಾಗಿದ್ದೇನೆಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಹೇಮಾವತಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ಪ್ರೆಸ್ ಕೆನಾಲ್ ನಿರ್ಮಾಣದಿಂದ ಗುಬ್ಬಿ, ತುಮಕೂರು, ಶಿರಾ, ತುಮಕೂರು ಗ್ರಾಮಾಂತರ ಕ್ಷೇತ್ರಗಳಿಗೆ ನೀರು ಹರಿಯುವುದಿಲ್ಲ ಎಂಬ ತಪ್ಪು ಕಲ್ಪನೆ ಸೃಷ್ಟಿಸಲಾಗಿದೆ. ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮುನ್ನ ತಜ್ಞರ ವರದಿಯನ್ನು ಪಡೆದುಕೊಂಡೇ ಈ ಯೋಜನೆಯನ್ನು ಅನುಷ್ಠಾನ ಮಾಡಿರುವುದು. 2024ನೇ ಜನವರಿ 5ರ ಸಂಪುಟ ಸಭೆಯಲ್ಲಿ ಈ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2024ರ ಸೆಪ್ಟಂಬರ್ 3ರಂದು ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಡಾ.ರಂಗನಾಥ ಅವರ ಸಮ್ಮುಖದಲ್ಲಿ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಮಾಹಿತಿ ನೀಡಿದಾಗ ಈ ಶಾಸಕರುನಮ್ಮ ಭಾಗಕ್ಕೆ ನೀರನ್ನು ಕೊರತೆ ಬಾರದಂತೆ ತೆಗೆದುಕೊಂಡು ಹೋಗುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದರು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕುಣಿಗಲ್ಗೆ ಚಾನಲ್ ಇದ್ದರೂ 2014ರಿಂದ 2024ರವರೆಗೆ ಚಾನಲ್ ಮೂಲಕ ಹರಿದಿರುವ ನೀರಿನ ಪ್ರಮಾಣವನ್ನು ತೆಗೆದುಕೊಂಡರೆ, ಒಂದು ಬಾರಿಯೂ ಪೂರ್ಣ ಪ್ರಮಾಣದ ನೀರನ್ನು ಒದಗಿಸಲಾಗಿಲ್ಲ. ಕುಣಿಗಲ್ಗೆ 3ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, 2014-15ರಲ್ಲಿ 0.210, 2015-16ರಲ್ಲಿ 0.230, 2016-17ರಲ್ಲಿ 0.030, 2017-18ರಲ್ಲಿ 0.072, 2018-2019ರಲ್ಲಿ 0.075, 2019-2020ರಲ್ಲಿ 0.227, 2020-21ರಲ್ಲಿ 0.4486, 2021-22ರಲ್ಲಿ 0.332, 2022-23ರಲ್ಲಿ 0.332, ಮತ್ತು 2023-24ರಲ್ಲಿ 0.2041 ಟಿಎಂಸಿಯಷ್ಟು ನೀರು ಹರಿದಿದೆ. ಕುಣಿಗಲ್ಗೆ ಪೂರ್ಣ ಪ್ರಮಾಣದಲ್ಲಿ ಚಾನಲ್ ಮುಖಾಂತರ ನೀರು ಹರಿಯದೆ ಇರುವುದರಿಂದ ಆ ಭಾಗದ ಶಾಸಕರು ಸರಕಾರಕ್ಕೆ ಮನವಿ ಮಾಡಿದಾಗ ಪೂರ್ಣ ಪ್ರಮಾಣದ ನೀರು ಕೊಡಲು ಈ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು 956 ಕೋಟಿ ರೂ.ವೆಚ್ಚದಲ್ಲಿ ಸರಕಾರ ಕೈಗೆತ್ತಿಕೊಂಡಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಅಶೋಕ್.ಕೆ.ವಿ. ಮತ್ತು ಪಾಲಿಕೆ ಆಯುಕ್ತೆ ಅಶ್ವಿಜಾ ಉಪಸ್ಥಿತರಿದ್ದರು.
‘ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆ: ಶಾಸಕರ ಸಹಿತ 18 ಮಂದಿ ವಿರುದ್ಧ ಎಫ್ಐಆರ್’
ಮೇ 31ರಂದು ಎಕ್ಸ್ಪ್ರೆಸ್ ಕೆನಾಲ್ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಓರ್ವ ಪಿಎಸ್ಐ ಸಹಿತ ಕೆಲ ಪೊಲೀಸರಿಗೆ ಗಾಯವಾಗಿದೆ. ಜಿಲ್ಲಾಡಳಿತ ಪ್ರತಿಭಟನೆ ಮಾಡಬಾರದೆಂದು ನಿಷೇಧಾಜ್ಞೆ ಹೇರಿದ್ದರೂ ಪ್ರತಿಭಟನೆ ಕೈಗೊಂಡು ಗುತ್ತಿಗೆದಾರರ ಹಿಟಾಚಿ ಸೇರಿದಂತೆ ಇತರ ವಸ್ತುಗಳಿಗೆ ಹಾನಿ ಮಾಡಲಾಗಿದೆ. ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆಂದು ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ಕುಮಾರ್ ಸಹಿತ 18 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.