ಮೀಸಲಾತಿ ಬಗ್ಗೆ ಜನಪ್ರತಿನಿಧಿಗಳು ಮಾತನಾಡಿ: ವಿ.ಎಸ್. ಉಗ್ರಪ್ಪ

ಬೆಂಗಳೂರು, ಡಿ.6: ಬಸವರಾಜ್ ಬೊಮ್ಮಾಯಿ ಸರ್ಕಾರ ಮಾಡಿದ ಮೀಸಲಾತಿ ಹೆಚ್ಚಳದ ಕಾಯ್ದೆಗೆ ಕೆಎಟಿನಲ್ಲಿ ಸೆಟ್ಸೈಡ್ ಹಾಗೂ ಹೈಕೋರ್ಟ್ ನಲ್ಲಿ ಸ್ಟೇ ಮಾಡಲಾಗಿದೆ. ಇದನ್ನು ನೋಡಿದರೆ ಎಸ್ಸಿ, ಎಸ್ಟಿ, OBC ಸಮುದಾಯಕ್ಕೆ ಅನ್ಯಾಯ ಆಗ್ತಿದೆ. ಇದಕ್ಕೆ ತಕ್ಷಣ ಕಾನೂನು ತಿದ್ದುಪಡಿ ತರಬೇಕು ಹಾಗೂ ಶೆಡ್ಯೂಲ್ 9ಗೆ ಸೇರಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಂಸದರು ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.
ದೇಶದಲ್ಲಿ 40 ಕೋಟಿ ಎಸ್ಸಿ, ಎಸ್ಟಿ ಜನರಿದ್ದಾರೆ. ಇದನ್ನು ನೋಡಿದ್ರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ನ್ಯಾಯಾಲಯಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಜನರಿಗೆ ಅನ್ಯಾಯ ಆಗ್ತಿದೆ. ಅವರ ಬುದುಕಿನ ಜೊತೆಗೆ ಚೆಲ್ಲಾಟ ಆಡಲಾಗುತ್ತಿದೆ. ತಮಿಳುನಾಡಿನಲ್ಲಿ 69 % ಮೀಸಲಾತಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ 56 % ಮಾಡಲಾಗಿದೆ. ಆದರೆ ತಮಿಳುನಾಡಿನಲ್ಲಿ ಮಾಡಿದ ರೀತಿ ಕರ್ನಾಟಕದಲ್ಲೂ ಮೀಸಲಾತಿ ಹೆಚ್ಚಳವನ್ನು ಶೆಡ್ಯೂಲ್ 9 ಗೆ ಸೇರಿಸಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಈಗ ಆ ಕೆಲಸ ಆಗಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
1992 ರ ಇಂದಿರಾ ಸಾಕಿ ಪ್ರಕರಣವನ್ನು ಮುಂದೆ ಇಟ್ಕೊಂಡು ಆಟ ಆಡಲಾಗ್ತಿದೆ. ಅದೇ ಪ್ರಕರಣದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶ ಇದೆ. ಈ ಕಾಯ್ದೆ ತಂದಾಗ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಈಗ ಸಂಸದರಾಗಿದ್ದಾರೆ. ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರದಲ್ಲಿ ಇದ್ದಾರೆ. 17 ST ಶಾಸಕರು, 36 Sc ಶಾಸಕರು ಇದ್ದಾರೆ. ಆದರೆ ಯಾರೂ ಮೀಸಲು ಹೆಚ್ವಳದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಹಿಂದೆ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗ ಅನೇಕರಿಗೆ ಮೀಸಲಾತಿ ನೀಡುವ ಭರವಸೆ ನೀಡಿದ್ರು. ಆದರೆ ತರಾತುರಿಯಲ್ಲಿ ಮೇಲ್ವರ್ಗಕ್ಕೆ ಶೇ.10 ಮೀಸಲಾತಿ ನೀಡಿದರು. ಸುಪ್ರೀಂ ಕೋರ್ಟ್ ಕೂಡ ಅದನ್ನು ಎತ್ತಿ ಹಿಡಿಯುತ್ತೆ. ಆದರೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಾಮಾಜಿಕ ನ್ಯಾಯಕ್ಕೆ ಇದರಿಂದ ಈಗ ಪೆಟ್ಟು ಬಿದ್ದಿದೆ. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ವ ಪಕ್ಷಗಳ ಸಭೆ ಕರೆಯಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟ ಕಾನೂನು ಜಾರಿಗೊಳಿಸಿ ಅದನ್ನು ಶೆಡ್ಯೂಲ್ 9 ಗೆ ಸೇರಿಸಬೇಕು. ಮೀಸಲಾತಿ ಭಿಕ್ಷೆಯಲ್ಲಿ, ಅದು ತಳ ಸಮುದಾಯಗಳ ಹಕ್ಕು. ಆದರೆ ಅನ್ನ ತಿನ್ನಬೇಡಿ ಎಂದು ಕೈ ಕಟ್ಟಿ ಹಾಕಿದ್ದಾರೆ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ನ್ಯಾಯಾಲಯವೂ ಕಾರಣ ಎಂದು ಉಗ್ರಪ್ಪ ಆರೋಪಿಸಿದರು.
SCP/TSP ಕಾಯ್ದೆಯನ್ನು ಹಿಂದೆ ಸಿದ್ದರಾಮಯ್ಯನವರೇ ಜಾರಿಗೆ ತಂದ್ರು, ಅದೇ ಆಧಾರದ ಮೇಲೆ ಬಜೆಟ್ ಅಲೋಕೇಷನ್ ಆಗ್ತಿದೆ. ಅಡಿಕ್ವೆಟ್ ಆಧಾರದ ಮೇಲೆ ಮೀಸಲಾತಿ ಜಾರಿಗೆ ತರಬೇಕಿತ್ತು. ಅದನ್ನು ಹಿಂದಿನ ಸರ್ಕಾರ ಮಾಡಿರಲಿಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಮೀಸಲಾತಿ ಶೆಡ್ಯೂಲ್ 9 ಗೆ ಸೇರಿಸಬೇಕು. ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಅದಕ್ಕಾಗಿ ಒತ್ತಾಯಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
ಅಧಿಕಾರ ಶಾಶ್ವತವಲ್ಲ, ದಯಮಾಡಿ ಎಲ್ಲ ಪಕ್ಷದಲ್ಲಿ ಇರುವ ರಾಜಕೀಯ ನಾಯಕರು ಇದರ ಬಗ್ಗೆ ಚರ್ಚೆ ನಡೆಸಬೇಕು. ಧ್ವನಿ ಎತ್ತಬೇಕು. ವಿಶೇಷವಾಗಿ ಬೊಮ್ಮಾಯಿ ಪ್ರಧಾನಿಗೆ ಇದರ ಬಗ್ಗೆ ಗಮನಕ್ಕೆ ತರಬೇಕು. ಇದರ ವಿಚಾರಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಇಡೀ ಎಸ್ಸಿ, ಎಸ್ಟಿ ಒಬಿಸಿ ಸಮುದಾಯ ಒಟ್ಟಾಗಿ ಬೀದಿಗಿಳಿಯಬೇಕಾಗುತ್ತದೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.
ಸಂವಿಧಾನದ ಕಲಂ 341 ಪ್ರಕಾರ ಅಸ್ಪೃಶ್ಯರನ್ನು ಮೀಸಲಾತಿ ಅಡಿಯಲ್ಲಿ SC ಗೆ ಸೇರಿಸಬೇಕು. ಕಲಂ 342 ಅಡಿಯಲ್ಲಿ ನಿಯಮದ ಪ್ರಕಾರ ಬರುವವರನ್ನು ST ಗೆ ಸೇರಿಸಬೇಕು. ಆರ್ಥಿಕವಾಗಿ ಹಿಂದುಳಿದವರನ್ನು OBC ಅಡಿಯಲ್ಲಿ ಸೇರಿಸಬೇಕು. ನಾನು ಯಾರನ್ನೂ ವಿರೋಧಿಸುತ್ತಿಲ್ಲ. ಮಹರ್ಷಿ ವಾಲ್ಮೀಕಿ ನಮಗೆ ಅದನ್ನೇ ರಾಮಾಯಣದ ಮೂಲಕ ಸರ್ವ ವರ್ಗದ ಸಮ ಸಮಾಜದ ಪರಿಕಲ್ಪನೆ ನೀಡಿದ್ದು ಎಂದರು.
ಯಾರನ್ನೂ ಎಸ್ಟಿಗೆ ಸೇರಿಸುವ ಬಗ್ಗೆ ವಿರೋಧ ಇಲ್ಲ. ಕುರುಬರು ಅಥವಾ ಯಾರನ್ನೇ ಸೇರಿಸಿದರೂ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ನಂತರ ಅದನ್ನು ಪರಿಶೀಲಿಸಿ ಸೇರಿಸಲಿ, ಆದರೆ ಸೇರಿಸುವಾಗ ಆ ಸಮುದಾಯಗಳಿಗೆ ಈಗಿರುವ ಮೀಸಲಾತಿಯನ್ನೂ ಜೊತೆಗೆ ತೆಗೆದುಕೊಂಡು ಬನ್ನಿ. ನಾನು ಇದನ್ನೇ ವಾಲ್ಮೀಕಿ ಜಯಂತಿ ದಿನ ಬಹಿರಂಗವಾಗಿ ಸಿದ್ದರಾಮಯ್ಯನವರ ಎದುರೇ ಹೇಳಿದ್ದೇನೆ ಎಂದು ಹೇಳಿದರು.
ಕುರುಬರನ್ನು ಎಸ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದು ಸಿದ್ದರಾಮಯ್ಯ ಅಲ್ಲ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗಲೇ 1991 ರಲ್ಲಿ ಆರ್ಡಿನೆನ್ಸ್ ಆಯ್ತು. ಸೀರಿಯಲ್ ನಂಬರ್ 38 ಅಡಿಯಲ್ಲಿ ಎಸ್ಟಿಗೆ ಸೇರಿಸಲು ನಾಯಕರು ಹಾಗೂ ಕುರುಬರನ್ನು ಶಿಫಾರಸ್ಸು ಮಾಡಲಾಗಿತ್ತು. ಆದರೆ ಆಗ ನಾಯಕರಿಗೆ ಮಾತ್ರ ಎಸ್ಟಿ ಮೀಸಲಾತಿ ಸಿಕ್ಕಿತ್ತು. ಆದರೆ ಹಿಂದೆ ಬಸವರಾಜ್ ಬೊಮ್ಮಾಯಿ ಸರ್ಕಾರ ಇದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಮೊದಲು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ article 15 ಹಾಗೂ 16 ಗೆ ತಿದ್ದುಪಡಿ ತಂದು ಶೆಡ್ಯೂಲ್ 9 ಗೆ ಸೇರಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ಈ ಸಮಸ್ಯೆಯಿಂದ ಈಗ ಯಾವ ನೇಮಕಾತಿಯೂ ಆಗ್ತಿಲ್ಲ. ಭಡ್ತಿಯನ್ನೂ ನೀಡಲಾಗ್ತಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಇದರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಈಗ ಈ ಬಗ್ಗೆ ಸರ್ಕಾರ ಸಮರ್ಥ ವಕೀಲರನ್ನು ಇಟ್ಟು ನ್ಯಾಯಾಲಯದಲ್ಲಿ ಕೂಡ ಇದಕ್ಕೆ ಪರಿಹಾರ ಕಂಡು ಹಿಡಿದು ಶೋಷಿತ ಸಮುದಾಯಗಳ ಹಿತ ಕಾಪಾಡಬೇಕು ಎಂದು ಉಗ್ರಪ್ಪ ಕಿಡಿ ಕಾರಿದರು.
ರಾಮಾಯಣದ ಅಯೋಧ್ಯ ಖಾಂಡ ಸರಗ 100, ಶ್ಲೋಕ 21,22,23 ರಲ್ಲಿ ರಾಜ್ಯಭಾರ, ಎಲ್ಲ ವರ್ಗದ ರಕ್ಷಣೆ, ದಿನಗೂಲಿ, ಸಂಬಳ ಈ ಎಲ್ಲದರ ಬಗ್ಗೆಯೂ ಇದೆ. ದೇಶ ಹೇಗೆ ಉದ್ದಾರ ಆಗುತ್ತೆ ಎಂಬುದನ್ನು ಅದರಲ್ಲಿ ಎಲ್ಲವನ್ನೂ ಹೇಳಿದ್ದಾರೆ. ಆದರೆ ಈ ಎಸ್ಸಿ, ಎಸ್ಟಿ ಸಮುದಾಯದ ಜನಪ್ರತಿನಿಧಿಗಳು ಇದರ ಬಗ್ಗೆ ಮಾತನಾಡಬೇಕು. ನಮ್ಮವರೇ ಇದ್ದಾಗಲೇ ವಾಲ್ಮೀಕಿ ನಿಗಮದಲ್ಲಿ ಹಗರಣ ಆಯ್ತು. ಆದರೆ ಇದರಲ್ಲಿ ಬದ್ದತೆ ಬೇಕು ಎಂದರು.
ಸಂಪುಟ ವಿಸ್ತರಣೆ: ಯಾರಿಗೆ ಹೇಳ್ಬೇಕೋ ಹೇಳಿದ್ದೇನೆ
ಸಂಪುಟ ವಿಸ್ತರಣೆಯಲ್ಲಿ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಯಾರ ಬಳಿ ಮಾತನಾಡಬೇಕೋ ಅವರ ಬಳಿ ಮಾತನಾಡಿದ್ದೇನೆ. ಆದರೆ ಹೈಕಮಾಂಡ್ ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲ ಬೇರೆ ಸಮುದಾಯಗಳನ್ನು ದಿಕ್ಕು ತಪ್ಪಿಸಿದ್ದಾರೆ. ಈಗ ಇದರ ಬಗ್ಗೆ ತುಟಿ ಬಿಚ್ಚಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ವಿಚಾರವೇ ಬೇರೆ
ಈ ಮೀಸಲಾತಿ ವಿಚಾರಕ್ಕೂ ನನ್ನ ವಯುಕ್ತಿಕ ರಾಜಕಾರಣಕ್ಕೂ ಸಂಬಂಧ ಇಲ್ಲ. ಹಿಂದೆ ಗಣಿ ಹಗರಣದ ಬಗ್ಗೆ ನಾನೇ ವರದಿ ತಯಾರಿಸಿದ್ದು. ಅದರ ಭಾಗವಾಗಿ ಯಡಿಯೂರಪ್ಪ ಜೈಲಿಗೆ ಹೋದ್ರು, ಬಳ್ಳಾರಿ ಗಣಿ ಹಗರಣದ ವಿರುದ್ಧ ಹೋರಾಟ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ತಂದ ಕಾನೂನಿನ ಬಗ್ಗೆ ಈಗ ಬಿಜೆಪಿ ನಾಯಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಕಾರ್ಯಧ್ಯಕ್ಷರಾದ ಎಂ. ನರಸಿಂಹಯ್ಯ, ಖಜಾಂಚಿ ಈ. ರಾಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಡಿ.ಕೆ. ಸಣ್ಣಾನಾಯಕ್, ರಮೇಶ್ ಹಿರೇಜಂಬೂರು, ನಾಗರಾಜ್ ಗಾಣದ ಹುಣಸೆ, ಉಪ ಕುಲಪತಿ ಶ್ರೀರಾಮುಲು, ಕೆಂಪರಾಮಯ್ಯ, ಹನುಮಂತಯ್ಯ, ಭೀಮಪುತ್ರಿ ಸಾವಿತ್ರಿ ಉಪಸ್ಥಿತರಿದ್ದರು.







