ಬೆಂಗಳೂರು | ಅಪಹರಣ ಪ್ರಕರಣ ಭೇದಿಸಿದ ಪೊಲೀಸರು: 5 ವರ್ಷದ ಬಾಲಕಿಯ ರಕ್ಷಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು: 5 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಪ್ರಕರಣವನ್ನು ಭೇದಿಸಿರುವ ಜ್ಞಾನಭಾರತಿ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಸಮ್ಮ ಹಾಗೂ ಸುಲೋಚನಾ ಬಂಧಿತ ಆರೋಪಿಗಳಾಗಿದ್ದು, 24 ಗಂಟೆಗಳೊಳಗೆ ಬಂಧಿಸಿ, ಬಾಲಕಿಯನ್ನು ರಕ್ಷಿಸಿ ಆಕೆಯ ಪೋಷಕರಿಗೊಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಂಧನೂರು ಮೂಲದವರೇ ಆದ ಬಾಲಕಿಯ ಪೋಷಕರು ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದು, 2 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಜೂನ್ 21ರಂದು ಪೋಷಕರ ಗಮನಕ್ಕೆ ಬಾರದಂತೆ ಬಾಲಕಿಯನ್ನು ಸಿಂಧನೂರಿಗೆ ಕರೆದೊಯ್ದಿದ್ದರು.
ಇತ್ತ ಮಗಳು ಕಾಣೆಯಾಗಿದ್ದಾಳೆಂದು ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬಾಲಕಿ ಪೋಷಕರಿಗೆ ಪರಿಚಿತ ಮಹಿಳೆಯೇ ಮಗುವನ್ನು ಕರೆದುಕೊಂಡು ಸಿಂಧನೂರಿಗೆ ತೆರಳಿರುವುದು ತಿಳಿದು ಬಂದಿತ್ತು.
ಕೂಡಲೇ ರಾಯಚೂರು ಪೊಲೀಸರಿಗೆ ಮಾಹಿತಿ ನೀಡಿದ ಜ್ಞಾನಭಾರತಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.





