ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಎಸ್ಐಆರ್ ಜಾರಿ : ಪ್ರಶಾಂತ್ ಭೂಷಣ್

ಬೆಂಗಳೂರು, ಮೇ 10 : ಬಿಜೆಪಿ ಸರಕಾರವು ಚುನಾವಣಾ ಆಯೋಗದ ಮೂಲಕ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ಹೊರತೆಗೆಯಲು ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸುತ್ತಿದೆ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ರವಿವಾರ ಇಲ್ಲಿನ ಆಶೀರ್ವಾದ್ ಸೆಂಟರ್ ನಲ್ಲಿ ನಡೆದ ‘ಕ್ಷೇತ್ರ ಮರುವಿಂಗಡನೆ, ಮಹಿಳಾ ಮೀಸಲಾತಿ ಮಸೂದೆ ಹಾಗೂ ಎಸ್ಐಆರ್- ಸಾರ್ವಜನಿಕ ವಿಚಾರ ಸಂಕಿರಣ’ದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎಸ್ಐಆರ್ ಎಂಬುದು ಗಂಬೀರ ಸಮಸ್ಯೆಯಾಗುತ್ತಿದ್ದು, ದೇಶದ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲು ಜಾರಿ ಮಾಡಲಾಗಿದೆ ಎಂದರು.
ಎಸ್ಐಆರ್ ಮತದಾರರ ಪಟ್ಟಿ ಪರಿಶೀಲನೆಗಾಗಿ ಚುನಾವಣಾ ಆಯೋಗವು ಮನೆಯಿಂದ ಮನೆಗೆ ಎಣಿಕೆ(ಎನ್ಯುಮರೇಶನ್) ಫಾರ್ಮ್ಗಳನ್ನು ಭರ್ತಿ ಮಾಡಲು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆಯು ಪ್ರಸ್ತುತ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ನವೀಕರಿಸುತ್ತದೆ ಎಂದು ಆಯೋಗವು ಹೇಳಿದೆ. ಆದರೆ ದೇಶದ ಮೊದಲ ಮತದಾರರ ಪಟ್ಟಿ ತಯಾರಿಸಿದಾಗ ಈ ಪ್ರಕ್ರಿಯೆ ಇರಲಿಲ್ಲ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಮೂಲಕ 60 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ. 27 ಸಾವಿರಕ್ಕೂ ಅಧಿಕ ಮಂದಿಯನ್ನು ಕೇವಲ ಹೆಸರಿನಲ್ಲಿ ಅಕ್ಷರಗಳು ವ್ಯತ್ಯಾಸ ಇದೆ ಎಂದು ತೆಗೆಯಲಾಗಿದೆ. ಇದರಲ್ಲಿ ಶೇ.70 ಮಂದಿ ಮುಸ್ಲಿಮರಾಗಿದ್ದಾರೆ. ಅಲ್ಲದೆ ಬಹುತೇಕ ಮಂದಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತದಾರರೇ ಆಗಿದ್ದಾರೆ. ಹೀಗಾಗಿಯೇ ಪಶ್ಚಿಮ ಬಂಗಾಳದ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಅಲ್ಪ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಅವರು ವಿಶ್ಲೇಷಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಎಸ್ಐಆರ್ ಬಗ್ಗೆ ಪ್ರಶ್ನಿಸಿದಾಗ, ಸರಿಯಾಗಿ ವಿಚಾರಣೆಯನ್ನು ಮಾಡಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ತೆರವುಗೊಳಿಸಿದ 60 ಲಕ್ಷ ಮತದಾರರ ಪೈಕಿ ಕೇವಲ 1,500 ಮತದಾರರನ್ನು ಮರಳಿ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಆಯೋಗವು ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದರೂ, ಪ್ರಯೋಜನವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಕೆ.ಎಸ್.ವಿಮಲಾ ಮಾತನಾಡಿ, ಎಸ್ಐಆರ್ ಜಾರಿ ಮಾಡುವ ಮೂಲಕ ಮುಸ್ಲಿಮರು ಸೇರಿದಂತೆ ಮಹಿಳೆಯರ ಹಕ್ಕುಗಳನ್ನು ಕಸಿಯಲಾಗಿದೆ. ಆದರೆ ಈಗ ಬಿಜೆಪಿ ಸರಕಾರವು ಮಹಿಳಾ ಮೀಸಲಾತಿಯನ್ನು ಪ್ರಸ್ತಾಪಿಸಿದೆ. ಅಲ್ಲದೆ ಕ್ಷೇತ್ರ ಮರುವಿಂಗಡನೆ ಮತ್ತು ಜನಗಣತಿಯ ಬಳಿಕವೇ ಮಹಿಳಾ ಮೀಸಲಾತಿಯನ್ನು ತರಲು ಉದ್ದೇಶಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
‘ಉತ್ತರ ಭಾರತದ ಜನಸಂಖ್ಯೆಯು ದಕ್ಷಿಣ ಭಾರತದ ಜನಸಂಖ್ಯೆಗಿಂತ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡನೆ ಮಾಡಿದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಅಲ್ಲದೆ ಕ್ಷೇತ್ರ ಮರುವಿಂಗಡನೆಯ ಸಮಿತಿಯು ಕೇಂದ್ರ ಬಿಜೆಪಿ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡಲಿದೆ. ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರ ಮರುವಿಂಗಡನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಹೀಗಾಗಿ ಅನ್ಯಾಯಕ್ಕೆ ಒಳಗಾಗುವ ದಕ್ಷಿಣ ರಾಜ್ಯಗಳು ಕ್ಷೇತ್ರ ಮರುವಿಂಗಡನೆ ವಿರುದ್ಧ ಬೀದಿ ಹೋರಾಟಗಳನ್ನೆ ಮಾಡಬೇಕು’
-ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್ನ ಹಿರಿಯ ವಕೀಲ






