ಬೆಂಗಳೂರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸೈಬರ್ ಸುರಕ್ಷತೆ ಹೆಚ್ಚಿಸಲು ಆದ್ಯತೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಬೆಂಗಳೂರಿನ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ಸುಗಮ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು, ಸೈಬರ್ ಸುರಕ್ಷತೆ ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದಲ್ಲಿ ಕಾರ್ಪೊರೇಟ್ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ಸಿಸಿಐಆರ್ಇ ಎಫ್ಎಂ ಅಂಡ್ ಸಿಆರ್, ಭಾರತೀಯ ಅರ್ಬನ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಇಂಟಿಗ್ರೇಟೆಡ್ ವರ್ಕ್ಸ್ಪೇಸಸ್ ಫೋರಮ್’ನಲ್ಲಿ ಮಾತನಾಡಿದ ಅವರು, ನಾಗರಿಕರ ಜೀವನದ ಗುಣಮಟ್ಟ ಸುಧಾರಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೆ ಪೂರಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ. ಸಾರಿಗೆ ಸೌಲಭ್ಯವೂ ಸೇರಿದಂತೆ ವಾಹನಗಳ ಸಂಚಾರ ವ್ಯವಸ್ಥೆ ಸುಧಾರಿಸುವ, ಸೈಬರ್ ಸುರಕ್ಷತೆ ಹೆಚ್ಚಿಸುವ ಮತ್ತು ಸುಸ್ಥಿರ ನಗರಾಭಿವೃದ್ಧಿ ಕಾರ್ಯಕ್ರಮಗಳು ನಿರಂತರ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಗೆ ಮಹತ್ವದ ಕೊಡುಗೆ ನೀಡಲಿವೆ ಎಂದರು.
ನಗರವು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ವಾಹನ ಸಂಚಾರ ಸಮಸ್ಯೆ ಪ್ರಮುಖವಾಗಿದೆ. ನಗರವು 1.5 ಕೋಟಿ ಜನಸಂಖ್ಯೆ ಮತ್ತು 1.25 ಕೋಟಿಗೂ ಹೆಚ್ಚು ವಾಹನಗಳಿಗೆ ನೆಲೆಯಾಗಿದೆ. ತಂತ್ರಜ್ಞಾನ ಹಾಗೂ ದತ್ತಾಂಶ ಆಧಾರಿತ ವಾಹನ ಸಂಚಾರ ಪರಿಹಾರಗಳನ್ನು ಜಾರಿಗೊಳಿಸುವ ಅಗತ್ಯ ಹೆಚ್ಚಿದೆ. ಸಾರಿಗೆ ಸಂಪರ್ಕ ಹೆಚ್ಚಿಸುವ, ದಟ್ಟಣೆ ತಗ್ಗಿಸುವ, ನಗರದ ಸುಸ್ಥಿರ ಬೆಳವಣಿಗೆಗೆ ಬೆಂಬಲ ನೀಡುವ ಯೋಜನೆ ಕಾರ್ಯಗತಗೊಳಿಸುವ, ಸಮನ್ವಯ ಸಾಧಿಸುವಂತಹ ದೀರ್ಘಾವಧಿ ಯೋಜನೆ ಜಾರಿಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.
ತ್ವರಿತ ಬೆಳವಣಿಗೆ ದಾಖಲಿಸುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಸೈಬರ್ ಅಪರಾಧವೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ವಿಶ್ವದ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ನಿರಂತರವಾಗಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಡಿಜಿಟಲ್ ಬೆದರಿಕೆಗಳನ್ನು ಎದುರಿಸಲು ನಗರವಾಸಿಗಳಲ್ಲಿ ಸೈಬರ್ ತಿಳಿವಳಿಕೆ ಮೂಡಿಸುವ, ಪ್ರತಿಕೂಲತೆ ಎದುರಿಸುವ ಸಾಮಥ್ರ್ಯ ಹೆಚ್ಚಿಸುವ ಹಾಗೂ ಇತರ ಸಂಘಟಿತ ಪ್ರಯತ್ನಗಳ ಅಗತ್ಯ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.






