‘ಸ್ವಾಯತ್ತತೆ’ಯು ಅಕಾಡೆಮಿ, ಪ್ರಾಧಿಕಾರಗಳ ಅವಿಭಾಜ್ಯ ಅಂಗ : ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು: ‘ಸ್ವಾಯತ್ತತೆಯು ಅಕಾಡೆಮಿ ಮತ್ತು ಪ್ರಾಧಿಕಾರಗಳ ಅವಿಭಾಜ್ಯ ಅಂಗವಾಗಿದ್ದು, ಸರಕಾರ, ಪಕ್ಷ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸ್ವಾಯತ್ತತೆ ವಿಷಯದಲ್ಲಿ ರಾಜಿ ಸಲ್ಲದು’ ಎಂದು ಹಿರಿಯ ಸಾಹಿತಿ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ‘ಅಕಾಡೆಮಿ ಮತ್ತು ಪ್ರಾಧಿಕಾರಗಳ ಸ್ವಾಯತ್ತತೆಯ ವಿಷಯ ಈಗ ಮುನ್ನಲೆಗೆ ಬಂದಿದೆ. ಈ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಸರಕಾರವೇ ನಾಮನಿರ್ದೇಶನ ಮಾಡುತ್ತದೆ. ಆದರೆ, ಈ ನಾಮನಿರ್ದೇಶನವು ಪಕ್ಷಕ್ಕೆ ಸಂಬಂಧಿಸಿದ್ದಲ್ಲ’ ಎಂದು ಸ್ಪಷ್ಟಣೆ ನೀಡಿದ್ದಾರೆ.
‘ಅಕಾಡೆಮಿ ಮತ್ತು ಪ್ರಾಧಿಕಾರಗಳು ಸರಕಾರದ ಅಂಗಸಂಸ್ಥೆಗಳೇ ಹೊರತು, ರಾಜಕೀಯ ಪಕ್ಷದ ಅಂಗ ಸಂಸ್ಥೆಗಳಲ್ಲ, ನಿಗಮ ಮಂಡಳಿಗಳಂತೆ ಅಲ್ಲವೇ ಅಲ್ಲ. ನಿಗಮ ಮಂಡಳಿಗಳಿಗೆ ಸಾಮಾನ್ಯವಾಗಿ ಸರಕಾರಗಳು ಪಕ್ಷದ ಕಾರ್ಯಕರ್ತರು ಅಥವಾ ಮುಖಂಡರನ್ನು ನಾಮನಿರ್ದೇಶನ ಮಾಡುತ್ತವೆ. ಅಕಾಡೆಮಿ ಪ್ರಾಧಿಕಾರಗಳ ನಾಮನಿರ್ದೇಶನಕ್ಕೆ ಪಕ್ಷನಿಷ್ಠೆ ಪ್ರಮುಖ ಮಾನದಂಡವಲ್ಲ. ಹೀಗಾಗಿ ಸರಕಾರದ ಈ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಅಗತ್ಯ, ಈ ಸೂಕ್ಷ್ಮತೆಯ ಅರಿವು ಸಂಬಂಧಪಟ್ಟವರಿಗೆ ಇರಬೇಕು’ ಎಂದು ಅವರು ತಿಳಿಸಿದ್ದಾರೆ.
ಆರಂಭದಲ್ಲಿ ‘ಅಕಾಡೆಮಿಗಳ ಸನ್ನದು’ ಎಂಬ ನಿಯಮಾವಳಿಯಿತ್ತು. ಸರಕಾರದ ಮಧ್ಯಪ್ರವೇಶ ಕಡಿಮೆಯಿತ್ತು. 2005ರಲ್ಲಿ ಈ ಸನ್ನದ್ದನ್ನು ಪರಿಷ್ಕರಿಸಿ ‘ಅಕಾಡೆಮಿಗಳ ನಿಯಾಮವಳಿ’ಯನ್ನು ಮರು ರಚನೆ ಮಾಡಲಾಯಿತು. ಕೆಲವು ಅಂಶಗಳಲ್ಲಿ ಅಧಿಕಾರಿಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸಲಾಯಿತು. ಸಾಂಸ್ಕೃತಿಕ ನಿಯಂತ್ರಣದ ಬದಲು ಸಂಪೂರ್ಣ ಸಾಂಸ್ಕೃತಿಕ ಸ್ವಾಯತ್ತತೆ ನೀಡಬೇಕೆಂದು ನನ್ನ ನೇತೃತ್ವದ ಸಾಂಸ್ಕೃತಿಕ ನೀತಿಯಲ್ಲಿ ಶಿಫಾರಸು ಮಾಡಲಾಗಿತ್ತು ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
‘ಈ ಹಿಂದೆ ಆಡಳಿತದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸಚಿವ ಸಂಪುಟದಲ್ಲಿ ಚರ್ಚಿಸಿ, ಸಂಪುಟ ಉಪ ಸಮಿತಿಯ ಪರಿಶೀಲನೆಗೆ ಒಪ್ಪಿಸಿ, ಅನಂತರ ನಮ್ಮ ಸಮಿತಿಯ ಅನೇಕ ಶಿಫಾರಸುಗಳನ್ನು ಒಪ್ಪಿ ಆದೇಶವನ್ನು ಹೊರಡಿಸಿತು. 2017ರ ಈ ಆದೇಶದಲ್ಲಿ ‘ಅಕಾಡೆಮಿಯ ಅಂಗರಚನೆ ನಿಯಮಾವಳಿ ಮತ್ತು ಹಣಕಾಸಿನ ನಿರ್ವಹಣೆಯಲ್ಲಿ ನಿಯಾಮಾನುಸಾರ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅನುಷ್ಠಾನ ಮಾಡುವ ಸ್ವಾಯತ್ತತೆಯನ್ನು ಅಕಾಡೆಮಿಗಳಿಗೆ ಒದಗಿಸುವುದು’ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ. ಪ್ರಾಧಿಕಾರಗಳಿಗೆ ಶಾಸನ ಬದ್ಧ ಅಧಿಕಾರವಿದೆ ಎಂದು ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.