ಸಾಹಿತ್ಯ ಕ್ಷೇತ್ರದಲ್ಲಿ ಅಲೆಮಾರಿ, ಅರೆ ಅಲೆಮಾರಿ ಸಾಹಿತಿಗಳ ಪ್ರಮಾಣ ಕಡಿಮೆ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು : ಸಾಹಿತ್ಯ ಕ್ಷೇತ್ರಕ್ಕೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಸಾಹಿತಿಗಳು ಬಂದಿಲ್ಲ. ಅಪರೂಪಕ್ಕೆ ಒಬ್ಬೊಬ್ಬರು ಮಾತ್ರ ಕಾಣಿಸುತ್ತಾರೆ. ಯಾಕೆಂದರೆ ಅವರಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಕಡಿಮೆ ಇದೆ ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಹುಮುಖಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಕಾವ್ಯ ಸಮ್ಮಿಲನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದಲಿತ, ಬಂಡಾಯ ಸಾಹಿತ್ಯ ಬಂದ ನಂತರವೂ ಸಹ ಅಲ್ಲಿರುವ ಸಾಹಿತ್ಯವನ್ನು ನಾವು ಒಳಗೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚಿಗೆ ಬೆಂಗಳೂರಿನ ಕಾನೂನು ವಿವಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಅಲೆಮಾರಿ, ಅರೆ ಅಲೆಮಾರಿ ಜನಾಂಗದಲ್ಲಿ ಶೇ.25ರಷ್ಟು ಜನರು ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಅದರಲ್ಲಿ ಶೇ.75ರಷ್ಟು ಜನರು ಮಧ್ಯದಲ್ಲೇ ಶಾಲೆ ಬಿಡುತ್ತಾರೆ. ಶೇ.2ರಷ್ಟು ಜನರು ಮಾತ್ರ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಒಬ್ಬ ಕವಿಗೆ ಮನಸ್ಸು ಮುಖ್ಯ. ಆ ಮನಸ್ಸಿನಲ್ಲಿ ಸಮಾಜ ಇರುತ್ತದೆ. ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಎಂದರೆ ಕನ್ನಡ ಸಾಹಿತ್ಯ. ಸ್ಥಳೀಯ, ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸಂವೇದನೆ ಉಳ್ಳದ್ದು ಕನ್ನಡ ಸಾಹಿತ್ಯ ಎಂದು ಹೇಳಿದರು.
ಒಂದು ಕಾವ್ಯ, ಸಾಹಿತ್ಯ ಎನ್ನುವುದು ಭೂಗೋಳವನ್ನು ಮೀರಿ ಹೋಗುತ್ತದೆ. ಕನ್ನಡಕ್ಕೆ ಒಂದು ಜಾಗತಿಕ ಸಂವೇದನೆ ಇರುವುದರಿಂದ ಜಾಗತಿಕ ಸಮಸ್ಯೆಗಳನ್ನು ಗಮನಿಸಬೇಕು. ಈಗ ಯುದ್ಧದ ಸಮಸ್ಯೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಅಸಮಾನತೆ, ಲಿಂಗತಾರತಮ್ಯದ ಸಮಸ್ಯೆ ಇದೆ. ಇವು ಕೇವಲ ಭಾರತಕ್ಕೆ ಮಾತ್ರ ಸೀಮಿತ ಅಲ್ಲ. ಇಡೀ ಜಗತ್ತಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ನಾವು ಹೇಗೆ ಸ್ಪಂಧಿಸಬಹುದು ಎನ್ನುವುದು ಮುಖ್ಯ ಎಂದರು.
ಜಗತ್ತಿನಲ್ಲಿ ಯುದ್ಧ ನಡೆಯುತ್ತಿದೆ. ಅನೇಕ ನಾಯಕರು ದೇಶ-ವಿದೇಶಗಳನ್ನು ಸುತ್ತುತ್ತಿದ್ದಾರೆ. ಆದರೆ ಅಲ್ಲಿ ಕೇವಲ ವ್ಯಾಪಾರದ ಒಪ್ಪಂದಗಳು ಮಾತ್ರವೇ ಆಗುತ್ತಿವೆ. ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಕೇವಲ ನಿಮಿಷಗಳು ಸಾಕು. ಆದರೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ತಿಂಗಳು-ವರ್ಷಗಳೇ ಬೇಕು. ಶೈಕ್ಷಣಿಕ ಒಪ್ಪಂದದ ಬಗ್ಗೆ ಮಾತೇ ಆಡುವುದಿಲ್ಲ. ಸಾಂಸ್ಕೃತಿಕ ವಿನಿಮಯದ ಒಪ್ಪಂದ ಆಗುತ್ತವೆಯೋ ಎಂದರೆ, ಸಾಂಸ್ಕೃತಿಕ ಪದದ ಅರ್ಥವೇ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ, ಕವಿಗಳಾದ ಉದಯನ್ ವಾಜಪೇಯಿ, ಸಯಾತ್, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರು.






