ದಲಿತ ನಾಯಕತ್ವದಲ್ಲಿ ಬಲಿಷ್ಠ ಭಾರತ ಕಟ್ಟಬೇಕು: ಪ್ರೊ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಪ್ರಸ್ತುತ ಜನಕೇಂದ್ರಿತವಾದ ಯೋಚನೆಗಳು ಹಿನ್ನಲೆಗೆ ಸರಿಯುತ್ತಿರುವಾಗ ನಾವೆಲ್ಲರೂ ದಲಿತ ನಾಯಕತ್ವದಲ್ಲಿ ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂಭಾಗ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಮದ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ವಾದ ಸಂಚಿಕೆ ಬಿಡುಗಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕೊಟ್ಟ ರಾಷ್ಟ್ರೀಯವಾದ ಜನಕೇಂದ್ರಿತ ರಾಷ್ಟ್ರೀಯವಾದ. ಅದಕ್ಕಿಂತ ಹಿಂದೆ ಇದ್ದಂತ ರಾಷ್ಟ್ರೀಯವಾದಗಳೆಲ್ಲವೂ ಮತಕೇಂದ್ರಿತ ರಾಷ್ಟ್ರೀಯವಾದಗಳು. ಈಗಲೂ ಅನೇಕರು ಮತಕೇಂದ್ರಿತವಾದ ಭಾರತವನ್ನು ಕಟ್ಟಲು ಹೊರಡುತ್ತಿದ್ದಾರೆ ಎಂದರು.
ಅಂಬೇಡ್ಕರ್ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಯಾಕೆಂದರೆ ಒಂದೆಡೆಯಲ್ಲಿ ಭಾರತದ ಸಂವಿಧಾನವನ್ನು ಅಪಮೌಲ್ಯಗೊಳಿಸುವ ಕೆಲಸ ನಡೆಯುತ್ತಿದೆ. ಸಂವಿಧಾನವನ್ನು ಇಟ್ಟುಕೊಂಡು ಸಂವಿಧಾನ ವಿರುದ್ಧದ ಚಳವಳಿಗಳು, ಕೆಲಸಗಳು ನಡೆಯುತ್ತಿವೆ. ಸಂವಿಧಾನದಲ್ಲಿ ಹೇಳಿದ ಅನುಚ್ಛೇದ 14, ಅನುಚ್ಛೇದ 15, ಅನುಚ್ಛೇದ 16ರಲ್ಲಿರುವ ಆಶಯಗಳನ್ನು ಈವತ್ತಿನ ಸಮಾಜ ಅಂಗೀರಿಸುತ್ತಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಮುಸ್ಲಿಮ್ರು ಇಂತಹ ಕಡೆ ಅಂಗಡಿ ಇಡಬೇಕು, ಇಡಬಾರದು ಎನ್ನುವುದು ನಿರ್ಣಯ ಆಗುತ್ತಿದೆ. ಕಾನೂನುಗಳು ಇದ್ದವರಿಗೆ ಒಂದು ಇಲ್ಲದಿರುವರಿಗೆ ಒಂದು, ಹಿಂದುಗಳಿಗೊಂದು, ಮುಸಲ್ಮಾನರಿಗೊಂದು ಹೀಗಾಗಿದೆ. ಜನಗಳಿಗೆ ನ್ಯಾಯಾಂಗದ ಮೇಲೆ ನಂಬಿಕೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಹೇಳಿದ ಚಿಂತನೆಗಳು ಗಟ್ಟಿಯಾಗಿ ಹಿಡಿದುಕೊಂಡು, ಅದನ್ನು ವರ್ತಮಾನಕ್ಕೆ ಒಗ್ಗಿಸುವ ಮತ್ತು ನಮ್ಮ ಕಾಲದ ಅಗತ್ಯಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿ ಜನಗಳ ಹತ್ತಿರ ತೆಗೆದುಕೊಂಡು ಹೋಗಬೇಕಾದ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಕೆಲಸವನ್ನು ಮಾಡುವುದಕ್ಕೆ ನಮಗೆ ದೊಡ್ಡಶಕ್ತಿಯಾಗಿ ಹಿನ್ನಲೆಯಲ್ಲಿರುವುದು ಅಂಬೇಡ್ಕರ್ ಅವರು. ನಮ್ಮನ್ನು ಕೈ ಹಿಡಿದು ಮುನ್ನಡಿಸುವ ಶಕ್ತಿ ಇರುವುದು ನಿಜವಾದ ಅರ್ಥದಲ್ಲಿ ಸಂವಿಧಾನ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ದಲಿತರು ಚಾರಿತ್ರಕವಾಗಿ ದೇಶವನ್ನು ನಡೆಸುವ ಹಕ್ಕಿದೆ. ಯಾಕೆಂದರೆ ಅತ್ಯಂತ ಶೋಷಿತರು. ಅವರು ಜವಾಬ್ದಾರಿಯಿಂದ ವರ್ತಿಸಬೇಕು. ಅದನ್ನು ಬೇಕಾಬಿಟ್ಟಿಯಾಗಿ ನಾಯಕತ್ವ ಸಿಕ್ಕಿದೆ ಎಂದು ಬೇರೆ ನಾಯಕತ್ವಗಳ ಜೊತೆಗೆ ಹೋಲಿಸಿಕೊಂಡು ಮಾಡುವ ಪ್ರಶ್ನೆಯಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್, ಲೇಖಕ ಡಾ.ನಟರಾಜ್ ಹುಳಿಯಾರ್, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.






