ಶೋಷಣೆಗೆ ಒಳಗಾದ ಮಹಿಳೆಯು ಮೊದಲು ಧ್ವನಿ ಎತ್ತಬೇಕು : ಪ್ರೊ.ಸಬಿಹಾ ಭೂಮಿಗೌಡ

ಬೆಂಗಳೂರು : ಶೋಷಣೆಗೆ ಒಳಗಾದ ಮಹಿಳೆಯು ಮೊದಲು ಧ್ವನಿ ಎತ್ತಬೇಕು, ಕಷ್ಟವಾದರೂ ಅದನ್ನು ಮೀರಿ ನಿಲ್ಲಬೇಕು ಎಂದು ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಕರೆ ನೀಡಿದ್ದಾರೆ.
ಬುಧವಾರ ಇಲ್ಲಿನ ಗಾಂಧಿ ಭವನದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಆಯೋಜಿಸಿದ್ದ ‘ಮಹಿಳೆಯರ ಸಮಾವೇಶ’ದಲ್ಲಿ ಮಾತನಾಡಿದ ಅವರು, ಉದ್ಯೋಗಸ್ಥ ಸ್ಥಳಗಳಲ್ಲಿ ಒಬ್ಬ ಮಹಿಳೆ ದೌರ್ಜನ್ಯಕ್ಕೆ ಒಳಗಾದರೂ ಜೊತೆಗಾರರು ಅವಳೊಟ್ಟಿಗೆ ನಿಂತು ಆಂತರಿಕ ದೂರು ಸಮಿತಿ ರಚಿಸಲು, ಶಕ್ತಿ ತುಂಬಬೇಕು ಎಂದು ಹೇಳಿದರು.
ಮಹಿಳೆಯರು ಮಾತನಾಡಬೇಕು, ಗಟ್ಟಿಯಾಗಿ ಸ್ಪಷ್ಟವಾಗಿ ಮಾತನಾಡಬೇಕು. ರಕ್ತ ಸಂಬಂಧವನ್ನು ಮೀರಿ ಸೋದರಿ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಸೋದರಿಯರ ಕಷ್ಟದಲ್ಲಿ ಜೊತೆ ನಿಲ್ಲಬೇಕು. ಎರಡು ಜಡೆ ಸೇರುವುದಿಲ್ಲ ಎನ್ನುವುದು ಸಮಾಜದ ಮಹಿಳಾ ವಿರೋಧಿ ಪರಿಕಲ್ಪನೆಯಾಗಿದ್ದು, ಇದನ್ನು ಈ ಸಮಾವೇಶ ಸುಳ್ಳಾಗಿಸಿದೆ ಎಂದು ಅವರು ಹೇಳಿದರು.
ಚಲನಚಿತ್ರ ಗೀತಕಾರ ಕವಿರಾಜ್ ಮಾತನಾಡಿ, ಸಮಾಜದಲ್ಲಿ ಗತಕಾಲದಿಂದಲೂ ಹೆಣ್ಣು ಮಕ್ಕಳನ್ನು ಹಲವಾರು ರೀತಿಗಳಲ್ಲಿ ಹೊಗಳಿ ಅವರನ್ನು ಬಲಿಪಶು ಮಾಡಲಾಗಿದೆ. ಎಲ್ಲ ಧರ್ಮಗಳು ಮಹಿಳೆಯನ್ನು ಮೌಢ್ಯದಲ್ಲಿ ಕಟ್ಟಿ ಹಾಕಿದೆ ಎಂದರು.
ಮಹಿಳೆಯರ ಸಮಾವೇಶದ ಹಕ್ಕೊತ್ತಾಯಗಳು:
•ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
•ಅತ್ಯಾಚಾರಗಳ ಪ್ರಕರಣಗಳನ್ನು ತ್ವರಿತವಾಗಿ ನಡೆಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳನ್ನು ಸ್ಥಾಪಿಸಬೇಕು.
•ಸಂತ್ರಸ್ತೆಗೆ ನ್ಯಾಯ ಹಾಗೂ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆಯನ್ನು ಖಾತ್ರಿಪಡಿಸಬೇಕು.
•ಜಸ್ಟೀಸ್ ವರ್ಮಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು.
•ಮಾಧ್ಯಮಗಳಲ್ಲಿ, ಮೊಬೈಲ್ನಲ್ಲಿ ಹರಡುವ ಅಶ್ಲೀಲತೆಯನ್ನು ತಡೆಗಟ್ಟಬೇಕು.
•ಬಾಲ್ಯ ವಿವಾಹ, ಅಪ್ರಾಪ್ತರ ಗರ್ಭಧಾರಣೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
•ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಪ್ರತ್ಯೇಕ ಆಯೋಗವನ್ನು ರಚಿಸಬೇಕು.
•ಮರ್ಯಾದೆಗೇಡು ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ರಚಿಸಿ ಮತ್ತು ಅನುಷ್ಠಾನಗೊಳಿಸಬೇಕು.
•ವಿ.ಬಿ.ಜಿ ರಾಮ್ ಜಿ ಯೋಜನೆಯನ್ನು ಕೈಬಿಡಿ, ನರೇಗಾ ಯೋಜನೆಯನ್ನು ಪುನರಾರಂಭಿಸಬೇಕು.







