ಚಿದಾನಂದಮೂರ್ತಿ, ಭೈರಪ್ಪ ಕನ್ನಡಕ್ಕೆ ಮಿಡಿದವರು : ಪ್ರೊ.ಸಿದ್ದರಾಮಯ್ಯ

ಬೆಂಗಳೂರು : ಪ್ರಾಮಾಣಿಕ ಸಂಶೋಧನೆಗೆ ಹೆಸರಾಗಿದ್ದ ಎಂ.ಚಿದಾನಂದಮೂರ್ತಿ ಮತ್ತು ತಮ್ಮ ಕಾದಂಬರಿಗಳ ಮೂಲಕ ಅಪಾರ ಓದುಗರನ್ನು ಸೃಷ್ಟಿಸಿದ ಎಸ್.ಎಲ್.ಭೈರಪ್ಪ ಇಬ್ಬರೂ ಕನ್ನಡ ಮತ್ತು ಕನ್ನಡಿಗರ ಪರವಾಗಿ ಮಿಡಿದವರಾಗಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ ಮತ್ತು ಸಪ್ನಾ ಪುಸ್ತಕ ಮಳಿಗೆ ಸಂಯುಕ್ತವಾಗಿ ಏರ್ಪಡಿಸಿದ್ದ 'ಕನ್ನಡ- ಕನ್ನಡಿಗ- ಕರ್ನಾಟಕ' ಕೃತಿಯ ಪರಿಷ್ಕೃತ 17ನೇ ಮುದ್ರಣ ಮತ್ತು ಎಸ್.ಎಲ್.ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು ಕೇವಲ 12 ಪುಟಗಳ ಕರಪತ್ರದ ರೂಪದಲ್ಲಿ ಬಂದ 'ಕನ್ನಡ-ಕನ್ನಡಿಗ-ಕರ್ನಾಟಕ'ವು ಈಗ 480 ಪುಟಗಳ ಸಮಗ್ರ ಸಂಪುಟದ ಮಟ್ಟಕ್ಕೆ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.
ಕನ್ನಡ-ಕನ್ನಡಿಗ-ಕರ್ನಾಟಕ ಇದೊಂದು ವಿಶಿಷ್ಟ ಕೃತಿ. ಈ ಕೃತಿಯಲ್ಲಿ ಕನ್ನಡಿಗರ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು ಏನೇನು ಎಂಬುದು ಗೊತ್ತಾಗುತ್ತದೆ. ಗೋಕಾಕ್ ಚಳವಳಿಯ ಹೋರಾಟದ ಪರಿಣಾಮದಲ್ಲಿ ಒಂದು ಉಪಉತ್ಪನ್ನದಂತೆ ರಚಿತವಾಗಿರುವ ಈ ಕೃತಿ ಏಕವ್ಯಕ್ತಿಯದ್ದಲ್ಲ, ಇದೊಂದು ಸಮಷ್ಟಿ ಚಿಂತನೆಯ ಫಲ. ಚಿದಾನಂದಮೂರ್ತಿ ಗುರುವಿನ ಸ್ಥಾನದ ಮೌಲ್ಯಗಳ ಮಾತೃರೂಪದಂತೆ ಬಾಳಿ ಬದುಕಿದರು. ಪ್ರಾಮಾಣಿಕತೆ, ಅಧಿಕಾರ ನಿರ್ಲಿಪ್ತಿ ಇವುಗಳಿಗೆ ಹೆಸರಾಗಿದ್ದರು. ಒಕ್ಕೂಟ ಧರ್ಮಕ್ಕೆ ಅಪಾಯ ಬಂದಿರುವ ಸಂದರ್ಭದಲ್ಲಿ ಇಂತಹ ಕೃತಿಗಳು ನೆರವಿಗೆ ಬರುತ್ತವೆ ಎಂದು ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸಂಶೋಧಕ ಡಾ.ಆರ್.ಶೇಷಶಾಸ್ತ್ರಿ ಮಾತನಾಡಿ, ಚಿದಾನಂದಮೂರ್ತಿಗಳು ಖಚಿತ ಪುರಾವೆಗಳನ್ನು ಆಧರಿಸಿ ಸಂಶೋಧನೆ ನಡೆಸುತ್ತಿದ್ದರು. ಇನ್ನೊಬ್ಬರ ಅಭಿಪ್ರಾಯವನ್ನು ಯಾವತ್ತೂ ತಮ್ಮದೆಂದು ಹೇಳಿಕೊಳ್ಳುತ್ತಿರಲಿಲ್ಲ. ಇಡೀ ಕರ್ನಾಟಕಕ್ಕೆ ಸಂಬಂಧಿಸಿದ ಬಹುಮುಖಿ ಧಾರೆಗಳ ಪರಿಪೂರ್ಣ ಗ್ರಂಥಾಲಯ ಸ್ಥಾಪಿಸಬೇಕು ಎಂಬ ಕನಸನ್ನು ಹೊಂದಿದ್ದರು. ಅದನ್ನು ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಅನುವಾದಕ ಬಿ.ಎಸ್.ಜಯಪ್ರಕಾಶ ನಾರಾಯಣ ಮಾತನಾಡಿ, ಎಸ್.ಎಲ್.ಭೈರಪ್ಪನವರು ಅನುದಿನದ ಸಂಗತಿ, ನಂಬಿಕೆ, ಸಂಘರ್ಷ, ಮಿಥ್ ಗಳ ಮೂಲಕವೇ ತಮ್ಮ ಕೃತಿಗಳಲ್ಲಿ ಒಂದು ಗಂಭೀರ ತಾತ್ವಿಕತೆಯನ್ನು ಕಟ್ಟಿಕೊಡುತ್ತಿದ್ದರು. ಅವರು ಗ್ರಾಮೀಣ ಭಾಷೆಯ ಮೂಲಕವೇ ಅಖಿಲ ಭಾರತೀಯ ಸ್ತರದ ಪ್ರಜ್ಞೆಯನ್ನು ಸೃಷ್ಟಿಸಿದರು. ಹುಟ್ಟು, ಸಾವು ಮತ್ತು ಕಾಮದ ನಿರ್ವಹಣೆಯಲ್ಲಿ ಅವರೊಬ್ಬ ಆಸಾಧಾರಣ ಲೇಖಕರಾಗಿದ್ದರು. ಲೇಖಕರನ್ನು ಎಡ-ಬಲ ತರಹದ ಐಡಿಯಾಲಜಿಗಳ ಮೂಲಕ ನೋಡುವುದು ಸರಿಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ಲೇಖಕರಾದ ಕೆ.ಎನ್.ಭಗವಾನ್, ಬೆ.ರಾ.ನಾಗರಾಜ್, ರಮೇಶ್ ಬಾಬು, ಸುರೇಶ್, ಸಪ್ನ ಬುಕ್ ಹೌಸ್ನ ಆರ್.ದೊಡ್ಡೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.







