ಕಾವೇರಿ ನೀರಿನ ಬಿಡುಗಡೆ ಆದೇಶ ಖಂಡಿಸಿ ಪೋಷಕ ಕಲಾವಿದರ ಸಂಘದಿಂದ ಖಾಲಿ ಬಿಂದಿಗೆ ಪ್ರತಿಭಟನೆ

ಬೆಂಗಳೂರು, ಜು.31: ತಮಿಳುನಾಡಿಗೆ ಪ್ರತಿದಿನ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿಯು ನೀಡಿರುವ ಸೂಚನೆಯನ್ನು ಖಂಡಿಸಿ, ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್ ಮುಂಭಾಗ ಖಾಲಿ ಬಿಂದಿಗೆ ಇಟ್ಟು ಪ್ರತಿಭಟನೆ ಹಾಗೂ ಅಣಕು ಪ್ರದರ್ಶನ ನಡೆಸಲಾಯಿತು.
ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಬೇಕು ಹಾಗೂ ರಾಜ್ಯದ ರೈತರ ಮತ್ತು ಜನರ ಹಿತಕ್ಕೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಾವೇರಿ ನೀರಿನ ಹಂಚಿಕೆ ಕುರಿತು ರಾಜ್ಯಕ್ಕೆ ಅನ್ಯಾಯವಾಗದಂತೆ ಸರಕಾರ ದೃಢ ನಿಲುವು ತಾಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಕಲಾವಿದರಾದ ವೈದ್ಯನಾಥ ಬಿರಾದರ್, ಗೌರವಾಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಗಣೇಶ್ ರಾವ್ ನವನೀತಂ,ಪುಷ್ಪ ಸ್ವಾಮಿ, ಸುಲೋಚನಾ ರೈ, ಕವನ ಭೂಮಿಕಾ ರೆಡ್ಡಿ, ಜೂನಿಯರ್ ಜಗ್ಗಿ ಸೇರಿದಂತೆ 150ಕ್ಕೂ ಹೆಚ್ಚು ಪೋಷಕ ಕಲಾವಿದರು ಭಾಗವಹಿಸಿ ಕಾವೇರಿ ಪರ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.






