ಛಾಯಾಗ್ರಾಹಕರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ : ರಾಮಲಿಂಗಾರೆಡ್ಡಿ

ಬೆಂಗಳೂರು : ತಮ್ಮ ಜೀವವನ್ನೇ ಪಣಕ್ಕಿಟ್ಟು, ಸನ್ನಿವೇಶದ ಪ್ರತಿಯೊಂದು ಭಾವನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಶಾಶ್ವತವಾಗಿ ಇತಿಹಾಸವನ್ನು ದಾಖಲಿಸುವಲ್ಲಿ ಛಾಯಾಗ್ರಾಹಕರ ಪರಿಶ್ರಮ ಅತ್ಯಂತ ಅನನ್ಯವಾಗಿದ್ದು, ಈಗ ಛಾಯಾಗ್ರಾಹಕರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪತ್ರಿಕಾ ಛಾಯಾಗ್ರಾಹಕರಿಗಾಗಿ ಆಯೋಜಿಸಲಾಗಿದ್ದ ‘ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ ಕಾರ್ಯಾಗಾರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷೆಯ ಹಂಗಿಲ್ಲದೆ ಭಾವನೆಗಳನ್ನು ಜಗತ್ತಿಗೆ ತಲುಪಿಸುವ ಶಕ್ತಿ ಛಾಯಾಚಿತ್ರಕ್ಕಿದೆ. ಒಂದು ಅತ್ಯುತ್ತಮ ಛಾಯಾಚಿತ್ರದ ಹಿಂದೆ ಛಾಯಾಗ್ರಾಹಕನ ತಾಳ್ಮೆ, ತಪಸ್ಸಿನಂತಹ ನಿರಂತರ ಶ್ರಮ ಹಾಗೂ ಸಮಯ ಪ್ರಜ್ಞೆ ಅಡಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಾಗಾರದಲ್ಲಿ ಕ್ಯಾಮೆರಾ ಹುಟ್ಟು, ಬೆಳವಣಿಗೆಗೆ ಸಂಬಂಧಿಸಿದಂತೆ ನೂರು ವರ್ಷದ ಹಳೆಯ ಕ್ಯಾಮೆರಾ ಪ್ರದರ್ಶನ ಮಾಡಿರುವುದು ಉತ್ತಮ ಕೆಲಸವಾಗಿದೆ. ಮುಂದೆ ಇಂತಹ ಕಾರ್ಯಕ್ರಮಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾಡಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮಾತನಾಡಿ, ಸಾವಿರ ಪದಗಳಲ್ಲಿ ಹೇಳಲಾಗದ ಸುದ್ದಿಯನ್ನು ಒಂದೇ ಒಂದು ಛಾಯಾಚಿತ್ರ ಅತ್ಯದ್ಭುತವಾಗಿ ಕಟ್ಟಿಕೊಡುತ್ತದೆ. ಇತಿಹಾಸ ದಾಖಲಿಸುವಲ್ಲಿ ಛಾಯಾಗ್ರಾಹಕರ ಪಾತ್ರ ಅಪಾರವಾಗಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಛಾಯಾಚಿತ್ರ ಪತ್ರಿಕೋದ್ಯಮವು ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದು, ಭಾಷೆಗಳ ಗಡಿಯನ್ನು ಮೀರಿ ಬೆಳೆದಿದೆ. ದೇಶಾದ್ಯಂತ 220 ಛಾಯಾಚಿತ್ರಗಳು ಈ ಪ್ರದರ್ಶನದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಅಕಾಡೆಮಿ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಧೈರ್ಯ ಮತ್ತು ಜಾಣತನದ ಜೊತೆಗೆ ಕಣ್ಣು ಹಾಗೂ ಹೃದಯದ ನಡುವೆ ಕ್ಯಾಮೆರಾ ಇಟ್ಟು ಚಿತ್ರ ತೆಗೆದಾಗ ಮಾತ್ರ ಅತ್ಯುತ್ತಮ ಫೋಟೋಗಳು ಹೊರಹೊಮ್ಮಲು ಸಾಧ್ಯ ಎಂದರು.
ಕಾರ್ಯಾಗಾರದಲ್ಲಿ ಪ್ರಥಮ ಬಹುಮಾನವನ್ನು ಕೇರಳದ ಛಾಯಗ್ರಾಹಕ ಬಿನುರಾಜ್ ಅವರಿಗೆ, ದ್ವೀತಿಯ ಬಹುಮಾನವನ್ನು ಮಹಾರಾಷ್ಟ್ರದ ಕುನಾಲ್ ಪಾಟೀಲ್ ಅವರಿಗೆ, ತೃತೀಯ ಬಹುಮಾನವನ್ನು ತೆಲಂಗಾಣದ ವೀರಗೋಣಿ ರಜಿನಿಕಾಂತ್ ಅವರಿಗೆ ನೀಡಲಾಯಿತು.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತೆ ಡಾ.ಬಿ.ಆರ್.ಮಮತಾ, ಪತ್ರಕರ್ತ ಪ್ರಭಾಕರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಸದಸ್ಯರಾದ ಡಾ. ಮಮತಾ, ಅಬ್ಬಾಸ್, ಕಂದಾವರ ವೆಂಕಟೇಶ್ ಹಾಗೂ ಕಿರಣ್ ಉಪಸ್ಥಿತರಿದ್ದರು.






