ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ | ನಟಿ ರನ್ಯಾರಾವ್ ಸೇರಿ ನಾಲ್ವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಬೆಂಗಳೂರು : ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ನಟಿ ರನ್ಯಾರಾವ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ನಗರದ ವಿಶೇಷ ಆರ್ಥಿಕ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಈ ಪ್ರಕರಣದಲ್ಲಿ ಬಂಧನಕೊಳ್ಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾರಾವ್ ಮತ್ತು ಆಕೆಯ ಸ್ನೇಹಿತ ತರುಣ್ ಕೊಂಡರಾಜು ಹಾಗೂ ಅವರಿಂದ ಚಿನ್ನ ಖರೀದಿಸಿದ್ದ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ವಿರುದ್ಧ ನ.20 ಗುರುವಾರದಂದು ಡಿಆರ್ಐ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.
ಈ ಆರೋಪಪಟ್ಟಿಯು 2,200 ಪುಟಗಳನ್ನು ಹೊಂದಿದ್ದು, ಅದರಲ್ಲಿ 350 ಪುಟಗಳ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ. 2025ರ ಮಾರ್ಚ್ 3ರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆ.ಜಿ. ಚಿನ್ನದ ಗಟ್ಟಿಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ವೇಳೆ ರನ್ಯಾರಾವ್ ಅವರನ್ನು ಬಂಧಿಸಲಾಯಿತು. ನಂತರ, ಇತರ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಭರತ್ ಕುಮಾರ್ ಜೈನ್ ಹೊರತುಪಡಿಸಿ, ರನ್ಯಾ, ತರುಣ್ ಮತ್ತು ಸಾಹಿಲ್ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ (ಕಾಫಿಫೋಸಾ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವುದಾಗಿ ತಿಳಿದುಬಂದಿದೆ.
ತರುಣ್ ಕೊಂಡರಾಜು ಮತ್ತು ರನ್ಯಾರಾವ್ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರು. ಅದಕ್ಕಾಗಿ ಜೀನಿವಾ ಅಥವಾ ಬ್ಯಾಂಕಾಕ್ ಮೂಲಕ ಭಾರತಕ್ಕೆ ಚಿನ್ನ ಸಾಗಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಡಿಆರ್ ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭಾರತಕ್ಕೆ ಬಂದಿಳಿದ ರನ್ಯಾರಾವ್ಳನ್ನು ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಬಂಧಿಸಿದ್ದರು. ಬಳಿಕ ಆಕೆ ಮನೆ ಮೇಲೂ ದಾಳಿ ನಡೆಸಿದ್ದರು.







