Bengaluru | ಅಣ್ಣನ ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಕೊಲೆಗೈದ ತಮ್ಮ

ಬೆಂಗಳೂರು: ಅಣ್ಣನ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಕಾನೂನು ವಿದ್ಯಾರ್ಥಿನಿಯೊಬ್ಬಳನ್ನು ತಮ್ಮ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದಿದೆ.
ಅಮೃತಾ (22) ಕೊಲೆಯಾದ ಯುವತಿ. ಕೊಲೆ ಆರೋಪಿಗಳಾದ ಧನುಷ್ ಹಾಗೂ ಆತನ ಸಹೋದರ ಸೂರ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 13ರಂದು ಘಟನೆ ನಡೆದಿದ್ದು, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅಮೃತಾ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ.
ಘಟನೆ ವಿವರ
ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಅಮೃತಾ ಹೆತ್ತವರೊಂದಿಗೆ ಎಚ್ಎಎಲ್ ಕೋಡಿಚಿಕ್ಕನಹಳ್ಳಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಯವಾಗಿದ್ದ ಧನುಷ್ ಮತ್ತು ಅಮೃತಾ ಬಳಿಕ ಪ್ರೇಮಿಗಳಾಗಿದ್ದರು. ಧನುಷ್ ತನಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿರುವ ಮತ್ತು ಒಂದು ಮಗು ಇರುವ ವಿಚಾರವನ್ನು ಅಮೃತಾರಿಂದ ಮುಚ್ಚಿಟ್ಟಿದ್ದ. ಈ ಸತ್ಯ ತಿಳಿಯುತ್ತಿದ್ದಂತೆ ಅಮೃತಾ ಆತನಿಂದ ದೂರವಾಗಿದ್ದರು ಎಂದು ತಿಳಿದುಬಂದಿದೆ.
ಅಣ್ಣ ಧನುಷ್ ಪ್ರೀತಿಯನ್ನು ಅಮೃತಾ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಧನುಷ್ ತಮ್ಮ ಸೂರ್ಯ ಜುಲೈ 13ರಂದು ಸಂಜೆ ಅಮೃತಾರ ಮನೆಯ ಬಳಿ ತೆರಳಿ ಗಲಾಟೆ ಮಾಡಿದ್ದ. ಈ ವೇಳೆ ಅಮೃತಾರಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದಿದ್ದ. ಗಂಭೀರಾವಸ್ಥೆಯಲ್ಲಿದ್ದ ಅಮೃತಾ ಚಿಕಿತ್ಸೆ ಫಲಿಸದೆ ಜುಲೈ 15ರಂದು ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.






