ವಿಕಸಿತ ಭಾರತಕ್ಕೆ ಪೂರಕವಾಗಿ ʼವಿಕಸಿತ ಕೃಷಿ ಸಂಕಲ್ಪ ಅಭಿಯಾನʼ ಆರಂಭ : ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಬೆಂಗಳೂರು : 2047ರ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಆರಂಭಿಸಲಾಗಿದ್ದು, ಭಾರತವನ್ನು ವಿಶ್ವದ ಆಹಾರ ಬುಟ್ಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಹೆಸರಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಸಿಎಆರ್-ಐಐಎಚ್ಆರ್) ಆವರಣದಲ್ಲಿ ಆಯೋಜಿಸಿದ್ದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ವಿಕಸಿತ ಭಾರತವನ್ನು ರೂಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು, ಅದಕ್ಕೆ ಅನುಗುಣವಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ದೇಶದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದ 145 ಕೋಟಿ ನಾಗರಿಕರಿಗೆ ಆಹಾರವನ್ನು ನೀಡುವ ಉದ್ದೇಶದೊಂದಿಗೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು(ಕೆವಿಕೆಗಳು), ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಹಯೋಗದೊಂದಿಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಗುರಿಯನ್ನು ಸಾಧಿಸಲು ಸಮಗ್ರ ಮಾರ್ಗಸೂಚಿಯನ್ನು ಈಗಾಗಲೇ ರೂಪಿಸಲಾಗಿದೆ ಎಂದು ಅವರು ಅವರು ಹೇಳಿದರು.
ವಿಕಸಿತ ಕೃಷಿ ಭಾರತ ಕಾರ್ಯಕ್ರಮದ ಭಾಗವಾಗಿ ‘ಪ್ರಯೋಗಾಲಯದಿಂದ ಭೂಮಿಗೆ’ ಎಂಬ ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ಕೃಷಿಯಲ್ಲಿ ವೈಜ್ಞಾನಿಕ ಜ್ಞಾನ ಮತ್ತು ಬೆಂಬಲವನ್ನು ಒದಗಿಸಲು ದೇಶಾದ್ಯಂತ 16,000ಕ್ಕೂ ಹೆಚ್ಚು ವಿಜ್ಞಾನಿಗಳು ರೈತರಿಗೆ ನೆರವು ನೀಡಲಿದ್ದಾರೆ. ಹತ್ತು ದಿನಗಳಲ್ಲಿ 1,896 ವಿಜ್ಞಾನಿಗಳ ತಂಡಗಳು 8,188 ಹಳ್ಳಿಗಳಲ್ಲಿ ಸಂಚರಿಸಿ ಸುಮಾರು 9 ಲಕ್ಷ ರೈತರೊಂದಿಗೆ ಸಂವಾದ ನಡೆಸಿವೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿಯೇ, ಕೃಷಿ ಮತ್ತು ಸಂಬಂಧಿತ ಇಲಾಖೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ 70ಕ್ಕೂ ಹೆಚ್ಚು ತಂಡಗಳು ಪ್ರತಿದಿನ ತೋಟಗಳಿಗೆ ಭೇಟಿ ನೀಡುತ್ತಿವೆ. ಅವಶ್ಯಕತೆ ಆಧಾರಿತ, ಸಮಸ್ಯೆ ಆಧಾರಿತ ಕೃಷಿ ಸಂಶೋಧನಾ ಕಾರ್ಯಕ್ರಮಗಳನ್ನು ರೂಪಿಸಲು ಈ ತಂಡಗಳು ರೈತರಿಂದ ನೇರವಾಗಿ ಮಾಹಿತಿಯನ್ನು ಪಡೆದುಕೊಂಡು ದಾಖಲಿಸುತ್ತಿವೆ ಎಂದು ಅವರು ಹೇಳಿದರು.
‘ಒಂದು ರಾಷ್ಟ್ರ, ಒಂದು ಕೃಷಿ, ಒಂದು ತಂಡ’ ಎಂಬ ಪರಿಕಲ್ಪನೆಯನ್ನು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹೊಂದಿದೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ(ಎಂ.ಐ.ಎಸ್.) ಅಡಿಯಲ್ಲಿ ಕೇಂದ್ರ ಸರಕಾರವು ಸಾರಿಗೆ ವೆಚ್ಚವನ್ನು ಭರಿಸುತ್ತದೆ. ಆ ಮೂಲಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಬೆಂಬಲಿಸುತ್ತದೆ. ಕಲಬೆರಕೆ ಕೀಟನಾಶಕಗಳ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ಐಸಿಎಆರ್-ಐಐಎಚ್ಆರ್ ಅಭಿವೃದ್ಧಿಪಡಿಸಿದ್ದ ನೂತನ ತಳಿಗಳು, ಹೂವುಗಳು, ತರಕಾರಿಗಳು, ಔಷಧೀಯ ಸಸ್ಯಗಳನ್ನು ಒಳಗೊಂಡ ಪ್ರದರ್ಶನವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಏಳು ಮಂದಿ ಅತ್ಯುತ್ತಮ ರೈತರಾದ ರತ್ನಮ್ಮ, ಗೋಪಾಲಗೌಡ, ಪದ್ಮಿನಿ ಗೌಡ, ಎಚ್.ಕೆ. ರಘು, ಮಂಗಳಮ್ಮ, ಮಹೇಶ್ ಎಚ್.ಎನ್. ಮತ್ತು ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್, ಶಾಸಕ ಎಸ್. ಆರ್. ವಿಶ್ವನಾಥ್ ಸೇರಿದಂತೆ ಮತ್ತಿತರರು ಇದ್ದರು.
ರವಿವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರ್ಜಾ ವಾಲಿಯಾ ಎಂಬುವವರ ಡ್ರ್ಯಾಗನ್ ಫ್ರೂಟ್ ಜಮೀನಿಗೆ ಭೇಟಿ ನೀಡಿ ಹಣ್ಣು ಬೆಳೆದ ರೈತ ಮಹಿಳೆಯನ್ನು ಶ್ಲಾಘಿಸಿದರು. ‘ಅನೇಕ ಯುವ ವೃತ್ತಿಪರರು ಕೃಷಿಯಲ್ಲಿ ಉತ್ತಮ ಭವಿಷ್ಯವನ್ನು ಕಾಣುತ್ತಿದ್ದಾರೆ. ಡ್ರ್ಯಾಗನ್ ಫ್ರೂಟ್ ಮತ್ತು ಇತರ ಆಧುನಿಕ ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಗಳಿಸುತ್ತಿದ್ದಾರೆ. ತನ್ನ ಐಟಿ ಉದ್ಯೋಗವನ್ನು ತೊರೆದ ನೀರ್ಜಾ ವಾಲಿಯಾ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಸಚಿವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.







