ಮಕ್ಕಳು ಶಿಕ್ಷಣವನ್ನು ಪಡೆಯದೆ ಇರಲು ಪ್ರಮುಖ ಅಡ್ಡಿ ಬಡತನ: ಎಸ್ಐಒ
ಬೆಂಗಳೂರು : ಇತ್ತೀಚೆಗೆ 2025ನೇ ಸಾಲಿನ ಬಜೆಟ್ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದು, ಪ್ರಾಥಮಿಕ ಶಿಕ್ಷಣ ವಿಭಾಗವನ್ನು ಪರಿಶೀಲಿಸಿದಾಗ, ಮಕ್ಕಳು ಶಿಕ್ಷಣವನ್ನು ಪಡೆಯದೆ ಇರಲು ಪ್ರಮುಖ ಅಡ್ಡಿ ಬಡತನವೇ ಆಗಿದೆ ಎಂದು ನೋಡಬಹುದಾಗಿದೆ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್(ಎಸ್ಐಒ) ವಿಶ್ಲೇಷಿಸಿದೆ.
ರವಿವಾರ ಎಸ್ಐಒ ಪ್ರಕಟನೆ ಹೊರಡಿಸಿದ್ದು, ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಬಜೆಟ್ ಗುರುತಿಸಿದೆ. ಅದನ್ನು ನಿವಾರಿಸಲು ಕ್ರಮಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಪ್ರಾರಂಭಿಕ ಮಕ್ಕಳಿಗೆ ಕೇಂದ್ರೀಕೃತ ಶಿಕ್ಷಣವು ಜೀವನಪೂರ್ತಿ ಕಲಿಕೆಯ ಅವಶ್ಯಕ ಅಡಿಪಾಯ ಎಂದು ಒತ್ತಿ ಹೇಳುತ್ತದೆ ಎಂದಿದೆ.
ರಾಜ್ಯ ಸರಕಾರ ಎನ್ಇಪಿ ಜಾರಿಗೊಳಿಸದೆ ಇರುವುದರಿಂದ, ಮುಂಚಿನ ಹಂತದ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮಕ್ಕಳಿಗೆ ಬಲವಾದ ವಿದ್ಯಾ ಅಡಿಪಾಯ ಕಲ್ಪಿಸುವುದು ಅಗತ್ಯ. ಈ ಜೊತೆಗೆ, ಶಿಕ್ಷಕರ ತರಬೇತಿಯನ್ನು ಬಲಪಡಿಸಬೇಕು ಹಾಗೂ ಸರಕಾರಿ ಶಾಲೆಗಳಲ್ಲಿ ಶಾಶ್ವತ ಶಿಕ್ಷಕರ ನೇಮಕಾತಿ ಮಾಡಬೇಕಾಗಿದೆ ಎಂದು ಸಂಘಟನೆ ತಿಳಿಸಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ದರ್ಜೆ ಕಾಲೇಜುಗಳನ್ನು ಸುಧಾರಣೆ ಮಾಡಲಾಗುವುದು, ಸಂಶೋಧನಾ ಅವಕಾಶಗಳನ್ನು ಒದಗಿಸಲಾಗುವುದು ಎಂಬುದು ಪ್ರಶಂಸನೀಯವಾಗಿದೆ. ಆದರೆ, ಕರ್ನಾಟಕದ ವಿಶ್ವವಿದ್ಯಾಲಯಗಳ ಸ್ಥಿತಿ ಶೋಚನೀಯವಾಗಿದ್ದು, ಶಾಶ್ವತ ಅಧ್ಯಾಪಕರ ಅನುಪಾತ ಬಹಳ ಕಡಿಮೆ ಇದೆ. ಹೀಗಾಗಿ ಘೋಷಿಸಲಾದ ಸಂಶೋಧನಾ ಸೌಲಭ್ಯಗಳು ಇನ್ನೂ ವಿದ್ಯಾರ್ಥಿಗಳಿಗೆ ಒದಗಿಸಿಲ್ಲ, ಇದು ಆತಂಕಕಾರಿ ಸಂಗತಿ ಎಂದು ತಿಳಿಸಿದೆ.
ಸರಕಾರ ಸಂಶೋಧನಾ ಅಭಿವೃದ್ಧಿಗೆ ಆಸಕ್ತಿತೋರಿಸುವುದಾದರೆ, ಮೂಲಸೌಕರ್ಯವನ್ನು ಶಕ್ತಗೊಳಿಸಬೇಕು, ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸಬೇಕು. ಪರ್ಯಾಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರಗಳನ್ನು ನಿರ್ಮಿಸುವುದು ಖಚಿತಗೊಳಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ.
ಅಲ್ಪಸಂಖ್ಯಾತ ಕಲ್ಯಾಣ ವಿಭಾಗವನ್ನು ಪರಿಶೀಲಿಸಿದಾಗ, ಮೌಲಾನಾ ಆಜಾದ್ ಶಾಲೆಗಳ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ಸ್ವಾಗತಾರ್ಹ. ಈ ಯತ್ನಗಳು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ಮಟ್ಟದ ಸಮಾನ ಶಿಕ್ಷಣ ಒದಗಿಸಬಹುದು. ಆದರೆ, ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶಗಳು ಲಭ್ಯವಿರಬೇಕು ಎಂಬುದು ಪ್ರಮುಖ ಚರ್ಚೆಯಾಗಿದೆ ಎಂದು ಸಂಘಟನೆಯು ತಿಳಿಸಿದೆ.
ವಕ್ಫ್ ಆಸ್ತಿ ಮೇಲೆ 15 ಮಹಿಳಾ ಕಾಲೇಜುಗಳ ನಿರ್ಮಾಣದ ತೀರ್ಮಾನ ಮೆಚ್ಚುಗೆಯಾಗಿದೆ. ಇದೇ ರೀತಿ, ಕೆಇಎ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶೇ.50 ಶುಲ್ಕ ಮನ್ನಾ ಯೋಜನೆಯೂ ಉತ್ತಮ ಕ್ರಮ. ಆದರೆ, ಮ್ಯಾನೇಜ್ಮೆಂಟ್ ಕೋಟಾ ಮೂಲಕ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅರಿವು ಸಾಲ ಹಾಗೂ ವಿದ್ಯಾರ್ಥಿವೇತನ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಸಂಘಟನೆಯು ಒತ್ತಾಯಿಸಿದೆ.
ಅಲ್ಪಸಂಖ್ಯಾತ ಯುವಕರಿಗಾಗಿ ಸ್ಟಾರ್ಟಪ್ಗಳಿಗೆ ಉತ್ತೇಜನ ನೀಡುವ ಯೋಜನೆ ಸುಸ್ವಾಗತ. ಆದರೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಸರಕಾರ ಗಮನಹರಿಸಬೇಕು. ಅಲ್ಪಸಂಖ್ಯಾತ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಬಜೆಟ್ ಮಂಜೂರಾದ ಅನುದಾನವನ್ನು ಸರಿಯಾಗಿ, ಸಮಯೋಚಿತವಾಗಿ ವಿತರಿಸುವುದು ಅತ್ಯಗತತ್ಯ ಎಂದು ಸಂಘಟನೆ ತಿಳಿಸಿದೆ.
ಸರಕಾರ ಸಂಪೂರ್ಣ ಬಜೆಟ್ನ ಶೇ.10ರಷ್ಟನ್ನು ಶಿಕ್ಷಣಕ್ಕೆ ಮೀಸಲಾಗಿಸಿದೆ. ಆದರೆ ಈ ನಿಧಿಗಳನ್ನು ಸರಿಯಾಗಿ ಬಳಸಿಕೊಂಡು ಸರಕಾರಿ ಶಾಲಾ-ಕಾಲೇಜುಗಳ ಮೂಲಭೂತ ಅಗತ್ಯಗಳನ್ನು ಪೂರೈಸಬೇಕು. ಜೊತೆಗೆ, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದಾಗಿ ಅಲ್ಪಸಂಖ್ಯಾತ ಮತ್ತು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರಭಾವಶಾಲಿ ಪಾತ್ರ ವಹಿಸಿ, ದೇಶಕ್ಕೆ ಮೌಲ್ಯಯುತ ಸಂಪತ್ತಾಗಲು ಸಾಧ್ಯ ಎಂದು ಸಂಘಟನೆಯು ಹೇಳಿದೆ.
ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್(ಎಂಎಎನ್ಎಫ್) ರದ್ದು ಮಾಡಿರುವುದರಿಂದ ರಾಜ್ಯದ ಪಿಎಚ್ಡಿ ವಿದ್ಯಾರ್ಥಿಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. ರಾಜ್ಯ ಸರಕಾರ ಈ ಹಿಂದೆ ನೀಡುತ್ತಿದ್ದ 25 ಸಾವಿರ ರೂ. ವಿದ್ಯಾರ್ಥಿವೇತನವನ್ನು 8,333ರೂ.ಗೆ ಇಳಿಸಿದ್ದು, 25 ಸಾವಿರ ರೂ.ಗಳ ವಿದ್ಯಾರ್ಥಿವೇತನವನ್ನು ಪುನಾಃ ಜಾರಿಗೆ ತರಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗಾನೈಜೇಷನ್ ಮನವಿ ಮಾಡಿದೆ.
‘ಮದರಸಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣ ಒದಗಿಸುವ ಯೋಜನೆ ಒಳ್ಳೆಯ ದಿಕ್ಕಿನಲ್ಲಿ ಸಾಗಿದರೂ, ಅದರ ಕಾರ್ಯಕ್ಷಮತೆಗೆ ನಿರ್ದಿಷ್ಟ ಬಜೆಟ್, ಅನುದಾನದ ಕೊರತೆ ಸಮಸ್ಯೆಯಾಗಿ ಪರಿಣಮಿಸಬಹುದು. ಸರಿಯಾದ ಹಣಕಾಸು ನೀಡದೆ ಈ ಯೋಜನೆಯ ಯಶಸ್ಸು ಅನುಮಾನಾಸ್ಪದ’
-ಮುಹಮ್ಮದ್ ಹಯ್ಯಾನ್, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ನ ಮುಖಂಡ







