ಕಾಲ್ತುಳಿತ ಪ್ರಕರಣ | ಬಿಜೆಪಿಗರು ಐಸಿಸಿ ಅಧ್ಯಕ್ಷ ಜಯ್ ಶಾ ವಿರುದ್ಧ ಹೋರಾಟ ಮಾಡಲಿ : ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್
ಬೆಂಗಳೂರು: "ಅಮಾಯಕರನ್ನು ಪ್ರಚೋದಿಸುವುದು, ನಂತರ ಆಗುವ ಅನಾಹುತಗಳಿಂದ ಲಾಭ ಪಡೆಯುವ ಸಂಚು ರೂಪಿಸುವುದು ಬಿಜೆಪಿಯ ಚುನಾವಣಾ ರಾಜಕೀಯದ ಕಾರ್ಯಕ್ರಮ. ಅದರ ಭಾಗವೇ ಆರ್ ಸಿಬಿ ಸಂಭ್ರಮಾಚರಣೆಯ ಸಂದರ್ಭದ ಘಟನೆಗಳು ಸಾಕ್ಷಿ" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಬಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, "RCB ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಂಜಾಗ್ರತಾ ಕ್ರಮಗಳನ್ನೇ ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿ ಜನರನ್ನು ಸರಕಾರದ ವಿರುದ್ಧ ಪ್ರಚೋದಿಸಿತ್ತು. ಆದರೆ ಈಗ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಘೋಷಣೆ ಮಾಡಿರುವುದು ಹಾಸ್ಯಾಸ್ಪದ. ಬಿಜೆಪಿಗರು ಇಂತಹ ಕೀಳು ಮಟ್ಟದ ರಾಜಕೀಯವನ್ನು ನಿಲ್ಲಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಬಿಜೆಪಿಗರು ಮಾಡಬೇಕಾಗಿರುವ ಹೋರಾಟ ಕೇಂದ್ರ ಗೃಹಸಚಿವ ಅಮಿತ್ ಶಾ ಮಗ ಬಿಸಿಸಿಐ ಮುಖ್ಯಸ್ಥರಾಗಿದ್ದ, ಐಸಿಸಿ ಅಧ್ಯಕ್ಷ ಜಯ್ ಶಾ ವಿರುದ್ಧವೇ ಹೊರತು ರಾಜ್ಯ ಸರಕಾರದ ವಿರುದ್ಧವಲ್ಲ. ಐಪಿಎಲ್ ನಡೆಸಿ ಸಾವಿರಾರು ಕೋಟಿ ರೂ. ಲಾಭ ಪಡೆಯುವ ಬಿಸಿಸಿಐ ಮತ್ತು ಐಸಿಸಿ ಈಗ ಬಾಯಿ ಮುಚ್ಚಿಕೊಂಡಿರುವುದು ಯಾಕೆ?" ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
"ಲಾಭ ಮಾತ್ರ ಬೇಕು ಪರಿಹಾರ ಬೇಡವೇ? ಬಿಜೆಪಿ ಮತ್ತು ಎನ್.ಡಿ.ಎ. ಫಲಾನುಭವಿ ಜೆಡಿಎಸ್ ಪಕ್ಷ ಕೂಡಲೇ ಗೃಹಸಚಿವ ಅಮಿತ್ ಶಾ ವಿರುದ್ಧ ಹೋರಾಟ ನಡೆಸಿ ಐಸಿಸಿ ಅಧ್ಯಕ್ಷ ಜಯ್ ಶಾ ಬಳಿ ಮೃತರ ಕುಟುಂಬಗಳಿಗೆ ತಲಾ ಐದು ಕೋಟಿ ರೂಪಾಯಿಗಳ ಪರಿಹಾರವನ್ನು ಕೊಡಿಸಲು ಒತ್ತಾಯಿಸಲಿ" ಎಂದು ಅವರು ಆಗ್ರಹಿಸಿದ್ದಾರೆ.