ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.4: ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿನ ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ಶನಿವಾರ ವರದಿಯಾಗಿದೆ.
ಮೆಟ್ರೋ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಮೆಟ್ರೋ ಅಧಿಕಾರಿಗಳು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು 35 ವರ್ಷದ ವೀರೇಶ್ ಎಂದು ಗುರುತಿಸಲಾಗಿದ್ದು, ವೀರೇಶ್ ವಿಧಾನಸೌಧದಲ್ಲಿ ‘ಡಿ’ ಗ್ರೂಪ್ ನೌಕರನಾಗಿದ್ದ ಎನ್ನಲಾಗಿದೆ.
ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದ ಬಳಿ ಬಂದ ವೀರೇಶ್ ಮಧ್ಯಾಹ್ನ 3.19ರ ಸುಮಾರಿಗೆ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಮಾದವಾರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ನಡುವೆ ರೈಲು ಸಂಚರಿಸುತ್ತಿತ್ತು. ತಕ್ಷಣಕ್ಕೆ ಗಮನಿಸಿದ ಮೆಟ್ರೋ ಅಧಿಕಾರಿಗಳು ಪ್ಲಾಟ್ಫಾರಂ-3ರಲ್ಲಿ ಮೆಟ್ರೋ ರೈಲಿನಡಿ ಸಿಲುಕಿಕೊಂಡಿದ್ದ ವೀರೇಶ್ನನ್ನು ರಕ್ಷಣೆ ಮಾಡಿದ್ದಾರೆ.
ಆದರೆ, ಗಂಭೀರ ಗಾಯಗೊಂಡಿದ್ದ ವೀರೇಶ್ನನ್ನು ಆ್ಯಂಬುಲೆನ್ಸ್ ನಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವೀರೇಶ್ನ ತಲೆಗೆ ತೀವ್ರವಾಗಿ ಗಾಯವಾಗಿರುವ ಹಿನ್ನಲೆ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ವೀರೇಶ್ ರಕ್ಷಣೆ ಬೆನ್ನಲ್ಲೆ ಅತ್ತ ಹಸಿರು ಮಾರ್ಗದಲ್ಲಿ ಸಂಚಾರ ಪುನಾರಂಭಗೊಳಿಸಲಾಗಿದೆ.







