ಎಸ್ಐಆರ್ ಮೂಲಕ ದಲಿತ, ಓಬಿಸಿ ಮತದಾರರಿಗೂ ಕತ್ತರಿ : ತೀಸ್ತಾ ಸೆಟಲ್ವಾಡ್

ಬೆಂಗಳೂರು : ವಿಶೇಷ ಮತಪಟ್ಟಿ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಿಂದ ಬರೀ ಅಲ್ಪಸಂಖ್ಯಾತರನ್ನು ಕೈಬಿಡುತ್ತಾರೆ ಎನ್ನುವ ಭ್ರಮೆ ಬೇಡ.ಈಗಾಗಲೇ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ದಲಿತ, ಹಿಂದುಳಿದ, ಆದಿವಾಸಿಗಳ ಮತದಾರರನ್ನು ಮತದಾನ ಹಕ್ಕಿನಿಂದ ಕೈಬಿಡಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಾ.ಎಚ್.ಎಸ್.ದೊರೆಸ್ವಾಮಿ ಸ್ವಾರಕ ಪ್ರತಿಷ್ಠಾನ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ, ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ, ಗೌರಿ ಮೀಡಿಯಾ ಟ್ರಸ್ಟ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ’ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್ಐಆರ್ನಿಂದ ಅಲ್ಪಸಂಖ್ಯಾತರ ಮತಗಳು ಮಾತ್ರವಲ್ಲ, ಎಲ್ಲ ಧರ್ಮೀಯರ ಮತಳಿಗೂ ಕತ್ತರಿ ಬಿದ್ದಿದೆ. ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ 91 ಲಕ್ಷ ಮತದಾರರನ್ನು ಕೈಬಿಟ್ಟಿರುವ ಮಾಹಿತಿ ಇದೆ. ಇದರಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಹೀಗಾಗಿ, ಇದು ಅತಿ ಅಪಾಯಕಾರಿ ಪ್ರಕ್ರಿಯೆ ಆಗಿದ್ದು, ಇದರ ವಿರುದ್ಧ ಗಟ್ಟಿ ದನಿಯೆತ್ತುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಎಸ್ಐಆರ್ ಹೆಸರಿನಲ್ಲಿ ಭಾರತದ ನಾಗರಿಕರ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಇದು ಕಾನುನು ಬಾಹಿರ ಮತ್ತು ಸಂವಿಧಾನ ವಿರೋಧಿ ಪ್ರಕ್ರಿಯೆ. ಅನೇಕ ದೋಷಗಳಿಂದ ಕೂಡಿದೆ. ಭಾರತೀಯರಲ್ಲದವರಿಗೆ ಮತದಾನದ ಹಕ್ಕು ಇರಲು ಸಾಧ್ಯವಿಲ್ಲ ಎಂಬುದು ಸರಿ. ಆದರೆ, ನಾಗರಿಕತ್ವವನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಇದರ ಜೊತೆ ಬೆಸೆಯುವುದು ಸರಿಯಲ್ಲ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದ್ದು, ಹೀಗಾಗಿ, ಮತದಾರರ ಪಟ್ಟಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಗಾಗಬೇಕು. ಮತಪಟ್ಟಿಗಳ ಮಾಹಿತಿಯನ್ನು ಸರಳ ರೂಪದಲ್ಲಿ ನಾಗರಿಕರಿಗೆ ದೊರೆಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂದು ತೀಸ್ತಾ ಸೆಟಲ್ವಾಡ್ ಹೇಳಿದರು.






