ಆಡಳಿತದ ಪಾರದರ್ಶಕತೆಗೆ ಮಾಹಿತಿ ತಂತ್ರಜ್ಞಾನವೇ ಪ್ರಮುಖ ಸಾಧನ: ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಅ. 14 : ಆಡಳಿತದ ಎಲ್ಲ ಹಂತಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ ಇದರಿಂದ ಪಾರದರ್ಶಕತೆ ಸ್ವಯಂ ಚಾಲಿತವಾಗಿ ಸ್ಥಾಪನೆಯಾಗುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.
ಮಂಗಳವಾರ ನಗರದಲ್ಲಿ ನಡೆದ ‘ಮಾಹಿತಿ ಹಕ್ಕು ಅಧಿನಿಯಮ’ಕ್ಕೆ 20 ವರ್ಷಗಳ ಪೂರೈಕೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಹಿತಿ ಹಕ್ಕು ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವುದು, ಸರಳಗೊಳಿಸುವುದು, ಮಾಹಿತಿ ಆಯೋಗಗಳ ಸ್ವಾತಂತ್ರ್ಯ ಮತ್ತು ಸಾಮಥ್ರ್ಯವನ್ನು ಹೆಚ್ಚಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾನೂನು ಬಾಧ್ಯತೆಯನ್ನಾಗಿ ಮಾಡದೆ ನೈತಿಕ ಸಂಸ್ಕೃತಿಯನ್ನಾಗಿ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯು ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಕಾಯ್ದೆಯ ದುರುಪಯೋಗ, ಕಚೇರಿಗಳ ಮೇಲೆ ಹೆಚ್ಚುತ್ತಿರುವ ಹೊರೆ ಮತ್ತು ಸಾರ್ವಜನಿಕ ಅರಿವಿನ ಕೊರತೆ. ನಾವು ಮಾಹಿತಿ ಹಕ್ಕು ಕಾಯ್ದೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು, ಅದರ ದುರುಪಯೋಗವನ್ನು ತಡೆಯಬೇಕು ಮತ್ತು ಈ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ಆಡಳಿತದ ಎಲ್ಲ ಹಂತಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವುದರಿಂದ ಪಾರದರ್ಶಕತೆಯ ಜೊತೆಗೆ ಸಾರ್ವಜನಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರಿಂದ ಪ್ರತಿಯೊಬ್ಬ ನಾಗರಿಕನು ‘ಮಾಹಿತಿ ಹಕ್ಕು’ ತನ್ನ ಹಕ್ಕು ಎಂದು ತಿಳಿಯುತ್ತಾನೆ. ಮಾಹಿತಿ ಹಕ್ಕು ಕಾಯ್ದೆ, 2005' ಪ್ರಜಾಪ್ರಭುತ್ವದ ಚೈತನ್ಯವನ್ನೇ ಸಬಲಗೊಳಿಸುವ ಸರಕಾರ ಮತ್ತು ನಾಗರಿಕರ ನಡುವೆ ಹೊಣೆಗಾರಿಕೆ, ಪಾರದರ್ಶಕತೆ, ನಂಬಿಕೆಗೆ ಅಡಿಪಾಯ ಹಾಕುವ ಜನರ ಹಕ್ಕಾಗಿದೆ ಎಂದು ಅವರು ತಿಳಿಸಿದರು.
ಆರ್ಟಿಐ ಕಾಯ್ದೆಯು ಪ್ರಜಾಪ್ರಭುತ್ವವನ್ನು ಬಲಪಡಿಸುವಂತಹ ಕಾನೂನು ನಿಬಂಧನೆ ಮತ್ತು ಅಡಿಪಾಯ ಎರಡೂ ಆಗಿದೆ. ಇದು ನಾಗರಿಕರು ಮತ್ತು ಸರಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಜನರಲ್ಲಿದೆ. ಸಾರ್ವಜನಿಕರು ಜಾಗೃತರಾಗಿದ್ದರೆ, ಆಡಳಿತವು ಸ್ವಯಂಚಾಲಿತವಾಗಿ ಜವಾಬ್ದಾರಿಯುತವಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಹಕ್ಕನ್ನು ಮತ್ತಷ್ಟು ಬಲಪಡಿಸುವುದು ಹೇಗೆ ಎಂಬುದರ ಕುರಿತು ಚಿಂತನಶೀಲ ಸಭೆ ನಡೆಸುವ ಅವಶ್ಯಕತೆಯಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ಕೆ.ರಾಮನ್, ಎಸ್. ರಾಜಶೇಖರ, ಡಾ.ಹರೀಶ್ ಕುಮಾರ್, ಕೆ.ಬದ್ರುದ್ದೀನ್, ನಾರಾಯಣ ಜಿ.ಚನ್ನಾಳ್, ರುದ್ರಣ್ಣ ಹರ್ತಿಕೋಟೆ, ಡಾ.ಬಿ.ಆರ್.ಮಮತಾ ಹಾಗೂ ಆಯೋಗದ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಭಾಗವಹಿಸಿದ್ದರು.







