ಬೆಂಗಳೂರು: ಕದ್ದ ಹಣದಲ್ಲಿ 20 ಮಕ್ಕಳ ಶಾಲಾ, ಕಾಲೇಜು ಶುಲ್ಕ ಪಾವತಿಸಿದ್ದ ಆರೋಪಿಯ ಬಂಧನ

ಬಂಧಿತ ಆರೋಪಿ
ಬೆಂಗಳೂರು: ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಶುಲ್ಕ ಪಾವತಿಸಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬೇಗೂರು ನಿವಾಸಿ ಶಿವು ಯಾನೆ ಶಿವರಪ್ಪನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತಾನು ವಾಸಿಸುತ್ತಿದ್ದ ಸ್ಥಳದಲ್ಲಿ ತನ್ನ ಸ್ನೇಹಿತರು ಅವರ ಮಕ್ಕಳಿಗಾಗಿ ಶಾಲಾ, ಕಾಲೇಜು ಶುಲ್ಕವನ್ನು ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಬಳಿಕ ಆರೋಪಿ ಶಿವು ನಗರದ ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ನುಗ್ಗಿ ಚಿನ್ನಾಭರಣವನ್ನು ಕಳವು ಮಾಡಿದ್ದಾನೆ. ಅನಂತರ ತನ್ನ ಸ್ನೇಹಿತರಾದ ಅನಿಲ್ ಯಾನೆ ಜಗ್ಗ ಮತ್ತು ವಿವೇಕ್ ಎಂಬುವರ ಸಹಾಯದಿಂದ ಮಾರಾಟ ಮಾಡಿದ್ದಾನೆ.
ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು ಬಂದ ಹಣದಲ್ಲಿ ವಿವೇಕ್ಗೆ 4 ಲಕ್ಷ ರೂ., ಅನಿಲ್ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ತನ್ನ ಬಡಾವಣೆಯ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜು ಶುಲ್ಕ ಕಟ್ಟಿದ್ದಾನೆ.
ಈ ಸಂಬಂಧ ಬಂದ ದೂರಿನನ್ವಯ ಬ್ಯಾಡರಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.





