ದೇಶದಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ: ಜೀವನಹಳ್ಳಿ ಆರ್. ವೆಂಕಟೇಶ್
ಬೆಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಸಮಾನತೆ ಸಾಮಾಜಿಕ ನ್ಯಾಯ, ಭಾತೃತ್ವ ಮತ್ತು ಸೌಹಾರ್ದ ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸವಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಕಾರಿ ಸಂಚಾಲಕ ಜೀವನಹಳ್ಳಿ ಆರ್.ವೆಂಕಟೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಬೀದರ್ ನ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ನಡೆದ ಪ್ರಜಾಪ್ರಭುತ್ವ ರಕ್ಷಣೆಗಾಗಿ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆಯರು, ಅಲ್ಪಸಂಖ್ಯಾತರು, ಆದಿವಾಸಿಗಳು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಮೇಲೆ ನಿರಂತರ ಶೋಷಣೆಯನ್ನು ಎದುರುಸುತ್ತಿರುವ ಈ ಸಂದರ್ಭದಲ್ಲಿ ನಾವು 75ನೆ ಗಣರಾಜ್ಯೋತ್ಸವವನ್ನು ಆಚರಿಸಿದ್ದೇವೆ ಎಂದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ 2022ರ ವಾರ್ಷಿಕ ವರದಿ ಪ್ರಕಾರ ಮಹಿಳೆಯರು, ದಲಿತರ ವಿರುದ್ಧದ ಅಪರಾಧಗಳು ಹೆಚ್ಚಳವಾಗಿವೆ. ಜಾತಿವಾದ-ಕೋಮುವಾದ, ಭಯೋತ್ಪಾದನೆ ದೇಶದಲ್ಲಿ ತಾಂಡವವಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಅವರು ಎಚ್ಚರಿಸಿದರು.
ದಲಿತರು ಎಂದೂ ಹಿಂಸೆಯ ಮಾರ್ಗವನ್ನು ಅನುಸರಿಸಿಲ್ಲ. ಅದಕ್ಕೆ ಮಾದರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವರ ಆದರ್ಶಗಳು. ಗಾಂಧಿಯನ್ನು ಡಿಎಸ್ಎಸ್ನ ಕೆಲ ಮುಖಂಡರು ಟೀಕಿಸಿರಬಹುದು. ಆದರೆ ಆರೆಸ್ಸೆಸ್ನಂತೆ ದ್ವೇಷಿಸುತ್ತಿಲ್ಲ. ಗೋಡ್ಸೆ ಗಾಂಧಿ ಕಾಲಿಗೆ ನಮಸ್ಕಾರ ಮಾಡಿ ನಂತರ ಗುಂಡು ಇಟ್ಟ. ಅದರಂತೆ ಸಂಸತ್ ಒಳಗೆ ಅಂಬೇಡ್ಕರ್ ಫೋಟೋಗೆ ಕೈ ಮುಗಿದು ಹೊರಗೆ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ವೆಂಕಟೇಶ್ ಟೀಕಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟಿತ್ತು. ಇದನ್ನು ಪ್ರಶ್ನೆ ಮಾಡಿದರೆ ರಾಜ್ಯದ ಸಂಸದೆ ಶೋಭಾ ಕರಾಂದ್ಲಾಜೆಯವರು ಹೆಚ್ಚಿನ ಶಿಕ್ಷಣ ಪಡೆಯುತ್ತಿರುವುದೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ. ಇವರ ಮಾತನ್ನು ಕೇಳಿದರೆ ದೇಶದಲ್ಲಿ ಯಾರೂ ಶಿಕ್ಷಣ ಪಡೆಯದೇ ಇರಬೇಕಾ ಎಂದು ವೆಂಕಟೇಶ್ ಪ್ರಶ್ನಿಸಿದರು.
ದೇಶದ ಪ್ರಧಾನಿಯವರು ಸಬ್ಕಾ ಸಾತ್-ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ ಅಮಿತ್ ಶಾ ಅವರು ಮುಸ್ಲಿಮ್ ಮೀಸಲಾತಿ ಮರಳಿ ಪಡೆಯಲು ಬಿಡುವುದಿಲ್ಲ ಎನ್ನುತ್ತಾರೆ. ಆಗ ಹೇಗೆ ಸಬ್ ಕಾ ಸಾತ್- ಸಬ್ ಕಾ ವಿಕಾಸ್ ಆಗುತ್ತದೆ. ಇನ್ನು ಒಳ ಮೀಸಲಾತಿ ಕನ್ನಡಿ ಒಳಗಿನ ಗಂಟು, ಏಕೆಂದರೆ ಒಳ ಮೀಸಲಾತಿ ನೀಡಲು ರಾಜ್ಯ ಸರಕಾರಗಳು, ಸಮಿತಿ, ಉಪಸಮಿತಿ ರಚನೆ ಮಾಡುತ್ತಾರೆ. ನಂತರ ಅದನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತಾರೆ. ಕೇಂದ್ರ ಸರಕಾರ ಅದನ್ನು ಉನ್ನತ ಮಟ್ಟದ ಸಮಿತಿಯನ್ನು ರಚಿಸುತ್ತದೆ. ಆದರೆ ಇಡಬ್ಲ್ಯೂಎಸ್ಗೆ ಈ ತರದ ಯಾವುದೇ ಪ್ರಕ್ರಿಯೆಗಳು ಇರುವುದಿಲ್ಲ. ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಸಂವಿಧಾನ ಸಾರುತ್ತದೆ. ಆದರೆ ಈಗ ಉದ್ಯಮಿಗಳಿಂದ, ಉದ್ಯಮಿಗಳಿಗಾಗಿ, ಉದ್ಯಮಿಗಳಿಗೋಸ್ಕರ ಎಂಬಂತಾಗಿದೆ ಎಂದು ವೆಂಕಟೇಶ್ ದೂರಿದರು.
ದಲಿತರ ಸಿಟ್ಟು, ಆಕ್ರೋಶ ಅಪಮಾನಗಳನ್ನು ಬಂಡವಾಳವನ್ನಾಗಿಸಿಕೊಂಡು ನಮ್ಮನ್ನು ಹಿಂಸೆಯತ್ತ ಪ್ರಚೋದಿಸುವಂಥ ಹುನ್ನಾರ ಜಾತಿವಾದಿ-ಕೋಮುವಾದಿ ಶಕ್ತಿಗಳಿಂದ ನಡೆಯುತ್ತಿದೆ. ಅವುಗಳಿಂದ ದಲಿತರಾದ ನಾವು ಜಾಗರೂಕರಾಗಿರಬೇಕು. ಇಂದಿಗೂ ಹಿಂದು ಸಮಾಜದಲ್ಲಿ ಮನುಸ್ಮೃತಿ ಮಾನ್ಯತೆಯನ್ನು ಪಡದುಕೊಂಡಿದೆ. ಹಿಂದು ಧರ್ಮದಲ್ಲಿ ನಾವು ಅಸ್ಪೃಶ್ಯರಾಗಿರುವ ಕಾರಣಕ್ಕೆ ಪ್ರಗತಿಯ ಎಲ್ಲಾ ಬಾಗಿಲುಗಳು ನಮಗೆ ಮುಚ್ಚಿಬಿಡುತ್ತಿವೆ ಎಂದು ವೆಂಕಟೇಶ್ ಎಚ್ಚರಿಸಿದರು.