ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ ಶೀಘ್ರವೇ ಜಾರಿ : ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು : ‘ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ-2025ಅನ್ನು ರೂಪಿಸಲು ಕೇಂದ್ರ ಕೈಗಾರಿಕಾ ಸಚಿವಾಲಯ ಕೆಲಸ ಮಾಡುತ್ತಿದೆ. ಈ ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವತ್ತ ಮೋದಿ ನೇತೃತ್ವದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಈ ನೀತಿಯುಶೀಘ್ರದಲ್ಲೇ ಹೊರಬರಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಇಲ್ಲಿನ ತುಮಕೂರು ರಸ್ತೆಯಲ್ಲಿನ ಬೆಂಗಳೂರಿನ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿಯು ನಾವೀನ್ಯತೆಯನ್ನು ಉತ್ತೇಜಿಸಲು, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವ್ಯವಸ್ಥಿತವಾದ ಚೌಕಟ್ಟನ್ನು ಒದಗಿಸುತ್ತದೆ ಎಂದರು.
ಈ ಪ್ರದರ್ಶನದಲ್ಲಿ 23 ದೇಶಗಳಿಂದ 1,100ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಯಂತ್ರೋಪಕರಣ ಉದ್ಯಮಕ್ಕೆ ಇದು ಅತ್ಯುತ್ತಮ ವೇದಿಕೆ ಆಗಿದೆ. ಯಂತ್ರೋಪಕರಣ ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, ಕರ್ನಾಟಕವು ಭಾರತದ ಯಂತ್ರೋಪಕರಣಗಳಲ್ಲಿ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ. ಈ ರಾಜ್ಯವು ದೇಶದ ಯಂತ್ರೋಪಕರಣಗಳ ರಾಜಧಾನಿ ಎಂದು ಬಣ್ಣಿಸಿದರು.
ಯಂತ್ರೋಪಕರಣ ಕ್ಷೇತ್ರಕ್ಕೆ ಕರ್ನಾಟಕವು ಐದು ದಶಕಗಳ ಹಿಂದೆಯೇ ಬಲಿಷ್ಟವಾದ ಅಡಿಪಾಯ ಹಾಕಿದೆ. ಹಿಂದೂಸ್ತಾನ್ ಮಷಿನ್ ಅಂಡ್ ಟೂಲ್ಸ್ ಈ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆಯನ್ನು ನೀಡಿ, ಉತ್ಪಾದನಾ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿತ್ತು. ಆಗಿನಿಂದಲೇ ಕರ್ನಾಟಕವು ನಾವೀನ್ಯತೆ ಮತ್ತು ಉತ್ಪಾದನಾ ಉತ್ಕೃಷ್ಟತೆಯನ್ನು ಪ್ರೊತ್ಸಾಹಿಸುವುದನ್ನು ಮುಂದುವರೆಸಿದೆ. ಪ್ರಸ್ತುತ, ಯಂತ್ರೋಪಕರಣ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಎಲ್ಲ ಆಯಾಮಗಳಲ್ಲಿಯೂ ಉತ್ತೇಜನ ನೀಡುತ್ತಿದೆ ಎಂದು ಅವರು ಹೇಳಿದರು.
ತಂತ್ರಜ್ಞಾನದ ಉನ್ನತೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಭಾರತ ಸ್ಪಷ್ಟ ಗುರಿಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಬೃಹತ್ ಕೈಗಾರಿಕೆ ಸಚಿವಾಲಯವು ತುಮಕೂರಿನಲ್ಲಿ ಮಷಿನ್ ಅಂಡ್ ಟೂಲ್ ಪಾರ್ಕ್ ಸ್ಥಾಪನೆಗೆ ಉತ್ತೇಜನ ನೀಡಿದೆ ಮತ್ತು ಐಐಟಿ-ಮದ್ರಾಸ್ನಲ್ಲಿ ಸುಧಾರಿತ ಉತ್ಪಾದನಾ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದಂತಹ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲು ಪಾಲುದಾರಿಕೆ ಹೊಂದಿದೆ ಎಂದು ಹೇಳಿದರು.







