ರೌಡಿಶೀಟರ್ ಸುಹಾಸ್ ಹತ್ಯೆ ಪ್ರಕರಣ | ನನಗೆ ತಪ್ಪು ಮಾಹಿತಿ ನೀಡಲಾಗಿತ್ತು : ಯು.ಟಿ.ಖಾದರ್

ಯು.ಟಿ.ಖಾದರ್
ಬೆಂಗಳೂರು : ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ನನಗೆ ತಪ್ಪು ಮಾಹಿತಿ ನೀಡಲಾಗಿದ್ದು, ಇದನ್ನು ಕೊಟ್ಟವರನ್ನು ದ್ವೇಷಿಸುತ್ತೇನೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಹತ್ಯೆ ಸಂಬಂಧ ನನಗೆ ಕೆಲವರು ಮಾಹಿತಿ ನೀಡಿದರು.ಇದನ್ನೆ ನಾನು ಹೇಳಿದ್ದೇನೆಯೇ ಹೊರತು ಬೇರೆ ಏನು ಇದರಲ್ಲಿ ಅಡಗಿಲ್ಲ. ಪೊಲೀಸ್ ತನಿಖೆಯ ಬಳಿಕ ನನಗೆ ಸಿಕ್ಕ ಮಾಹಿತಿ ತಪ್ಪು ಎಂಬುವುದು ಗೊತ್ತಾಗಿದೆ ಎಂದರು.
ನನಗೆ ಸಿಕ್ಕ ತಪ್ಪು ಮಾಹಿತಿಯಿಂದ ಕೆಲ ರಾಜಕೀಯ ನಾಯಕರು ನನ್ನನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಸ್ವಾಭಾವಿಕವೇ ಆಗಿದೆ. ನಾನು ಎಂದಿಗೂ ಅವರಿಗೆ ತಿರುಗೇಟು ನೀಡುವುದಿಲ್ಲ. ಬದಲಾಗಿ, ನನಗೆ ತಪ್ಪು ಮಾಹಿತಿ ನೀಡಿ, ಹೀಗೆ ಸಿಲುಕುವಂತೆ ಮಾಡಿದವರನ್ನೇ ದ್ವೇಷಿಸುತ್ತೇನೆ ಎಂದು ಖಾದರ್ ನುಡಿದರು.
ನನ್ನ ಮೇಲೆ ನಾನು ಪ್ರತಿನಿಧಿಸುವ ಕ್ಷೇತ್ರದ ಜನರು ಮಾತ್ರವಲ್ಲದೆ, ಈಡೀ ಕರಾವಳಿ ಭಾಗದ ಜನರ ವಿಶ್ವಾಸ, ಪ್ರೀತಿ ಇದೆ. ಹೀಗಾಗಿ, ಬೇರೆಯವರ ಟೀಕೆ, ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ಸುಹಾಸ್ ಹತ್ಯೆ ಪ್ರಕರಣದಲ್ಲಿ ಯಾರು ಆರೋಪಿಗಳು ಇದ್ದರೂ ಅವರ ವಿರುದ್ಧ ಕಠಿಣ ಕಾನೂನು ತನಿಖೆ ನಡೆದು ಶಿಕ್ಷೆ ಪ್ರಕಟಗೊಳ್ಳಬೇಕೆಂದು ಈಗಾಗಲೇ ಸಂಬಂಧಿಸಿದ ತನಿಖಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಉಲ್ಲೇಖಿಸಿದರು.