ವಾಲ್ಮೀಕಿ ನಿಗಮದ ಪ್ರಕರಣ ಸಿಬಿಐಗೆ ವರ್ಗಾಯಿಸುವುದಿಲ್ಲ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣವನ್ನು ನಾವಾಗಿಯೇ ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬ್ಯಾಂಕ್ನವರು ಸಿಬಿಐಗೆ ದೂರು ನೀಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನೂರು ಕೋಟಿ ರೂ. ಮೇಲು ಹಗರಣಗಳಾದಾಗ ಪ್ರಕರಣ ಸಿಬಿಐಗೆ ವರ್ಗಾವಣೆಯಾಗುತ್ತದೆ. ಈಗ ಸಿಐಡಿಯವರು ತನಿಖೆ ಆರಂಭಿಸಿದ್ದಾರೆ. ನೂರು ಕೋಟಿ ರೂ. ಅಧಿಕ ಅಕ್ರಮ ನಡೆದಿದೆಯೋ, ಏನಾಗಿದೆ ಎಂಬುದು ಸಿಐಡಿ ತನಿಖೆಯಿಂದ ಗೊತ್ತಾಗಲಿದೆ. ಅಕ್ರಮವಾಗಿದ್ದರೆ ಮುಂದೆ ಏನು ಆಗುತ್ತದೆ ಎಂಬುದನ್ನು ನೋಡೋಣ. ನಾವಾಗಿಯೇ ಸಿಬಿಐಗೆ ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಜೊತೆ ಚರ್ಚೆ ಕುರಿತು ಪ್ರತಿಕ್ರಿಯಿಸಿ, ನಾವು ಸಿಬಿಐಗೆ ವರ್ಗಾವಣೆ ಮಾಡುವುದಿಲ್ಲ. ಅಂತಹ ಸಂದರ್ಭ ಬಂದಾಗ ಸಿಎಂ ಜೊತೆ ಚರ್ಚೆ ಮಾಡಲೇ ಬೇಕಾಗುತ್ತದೆ. ಪ್ರತಿಭಟನೆ ಮಾಡುವುದು ಗಡವು ನೀಡುವುದು ವಿಪಕ್ಷದವರ ಹಕ್ಕು, ಮಾಡಲಿ. ಸರ್ಕಾರದಲ್ಲಿ ನಮಗೆ ಆದಂತಹ ಜವಾಬ್ದಾರಿಗಳಿವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್ನಲ್ಲಿ ಸಾ.ರಾ.ಮಹೇಶ್ ಕೈವಾಡ ಕುರಿತು ಪ್ರತಿಕ್ರಿಯಿಸಿ, ಸಾ.ರಸ.ಮಹೇಶ್ ಹೆಸರು ಮಾಧ್ಯಮದಲ್ಲಿ ಬಂದಿರುವುದನ್ನು ನೋಡಿದ್ದೇನೆ. ಮೊದಲ ಬಾರಿಗೆ ಸಾ.ರಾ.ಮಹೇಶ್ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.
ಯಾಗ ಮಾಡುವುದರಿಂದ ಸರ್ಕಾರ ಬೀಳುವುದು, ಸರ್ಕಾರ ಬರುವುದಾಗಿದ್ದರೆ, ಈ ದೇಶದಲ್ಲಿ ಬಹಳ ಜನ ಯಾಗ ಮಾಡಿಕೊಂಡು ಕುಳಿತಿರಬೇಕಾಗುತ್ತಿತ್ತು ಎಂದರು.