ಕಾಂಗ್ರೆಸ್ ಅಪಪ್ರಚಾರದ ನಡುವೆಯೂ ಬಿಹಾರದಲ್ಲಿ ಎನ್ಡಿಎ ಐತಿಹಾಸಿಕ ಗೆಲುವು ದಾಖಲಿಸಿದೆ : ವಿಜಯೇಂದ್ರ

ಬೆಂಗಳೂರು : ‘ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ‘ಮತಗಳ್ಳತನ’ದ ಕುರಿತು ಬಿಹಾರ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಅಪಪ್ರಚಾರ ಮಾಡಿದ್ದರು. ಆ ಮೂಲಕ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ, ಕುತಂತ್ರವನ್ನು ಅಲ್ಲಿನ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಪಪ್ರಚಾರದ ನಡುವೆಯೂ ಬಿಹಾರ ರಾಜ್ಯದಲ್ಲಿ ಎನ್ಡಿಎ ಐತಿಹಾಸಿಕ ಗೆಲುವು ದಾಖಲಿಸಿದೆ. ನರೇಂದ್ರ ಮೋದಿ ಜನಪ್ರಿಯತೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಹಾರ ಮತದಾರರು ಮತ್ತೊಮ್ಮೆ ಎನ್ಡಿಎ ಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು.
ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ಕಾರ್ಯತಂತ್ರ, ರಾಷ್ಟ್ರೀಯಾಧ್ಯಕ್ಷ ನಡ್ಡಾ ಅವರ ನೇತೃತ್ವ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಪ್ರಯತ್ನ, ಎರಡೂ ಪಕ್ಷಗಳ ಕಾರ್ಯಕರ್ತರ ಪರಿಶ್ರಮ- ಇದೆಲ್ಲದರ ಪರಿಣಾಮವಾಗಿ ಒಂದು ಐತಿಹಾಸಿಕ ಗೆಲುವು ದಾಖಲಾಗಿದೆ ಎಂದು ವಿಜಯೇಂದ್ರ ವಿವರಿಸಿದರು.
ನೀರು ಕೊಡದಿದ್ದರೆ ಪರಿಹಾರ ಕೊಡಿ: ತುಂಗಭದ್ರಾ ಜಲಾಶಯದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ರೈತರನ್ನು ಸೇರಿಸಿಕೊಂಡು ಸ್ಥಳೀಯವಾಗಿ ಹೋರಾಟ ರೂಪಿಸಲಿದ್ದೇವೆ. ಎರಡನೇ ಬೆಳೆಗೂ ಸರಕಾರ ನೀರನ್ನು ಕೊಡಬೇಕು. ಒಂದು ವೇಳೆ ನೀರು ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೆ ಆ ಭಾಗದ ರೈತರಿಗೆ ಎಕರೆಗೆ 25 ಸಾವಿರ ರೂ.ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.







