ಮಳೆಗೆ ಮುಳುಗಿದ ವಿನಾಯಕನಗರ ಕೊಳಚೆ ಪ್ರದೇಶ: ಸಂಕಷ್ಟದಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು
ಆಶ್ರಯಕೊಟ್ಟ ಸಾಜಿದಾ ಬೇಗಂ

ಬೆಂಗಳೂರು, ಮೇ 19: ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಗ್ರೇಟರ್ ಬೆಂಗಳೂರು ಆಗಿ ಹೊಸ ಪರಿಕಲ್ಪನೆಯೊಂದಿಗೆ ಹೊರಹೊಮ್ಮುತ್ತಿರುವ ರಾಜಧಾನಿಯ ಬಹುತೇಕ ಬಡಾವಣೆಗಳು ಜಲಾವೃತಗೊಂಡಿವೆ. ಇಲ್ಲಿನ ದೇವಸ್ಥಾನ, ಮಸೀದಿ, ಮನೆ, ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಅವಸಾನಗೊಂಡಿವೆ. ಇನ್ನು ನಗರದ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡ ಜನರ ಬದುಕಂತೂ ಹೇಳತೀರದು. ವಿಪರೀತ ಮಳೆಗೆ ಸಿಲುಕಿದ ಸಂತ್ರಸ್ತರಿಗೆ ಜನಪ್ರತಿನಿಧಿಗಳ, ಅಧಿಕಾರಿಗಳನ್ನು ಕಾಯದೇ ಸ್ಥಳೀಯರೇ ಆಶ್ರಯದಾತರಾಗಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ವಿನಾಯಕನಗರ ಎಂಬಲ್ಲಿ ಸುಮಾರು 1,500 ಅಧಿಕ ಬಡ ಕುಟುಂಬಗಳ ಬದುಕು ಮಳೆಯ ನೀರಿಗೆ ಸಿಲುಕಿ ದಿಕ್ಕಾಪಾಲಾಗಿರುವುದಲ್ಲದೇ ಚರಂಡಿಗಳಿಂದ ಹೊಮ್ಮುವ ದುರ್ವಾವಸೆಯ ನೀರಿನ ನಡುವೆಯೇ ಬದುಕುವಂತಾಗಿದೆ. 30 ವರ್ಷಗಳ ಹಿಂದೊಮ್ಮೆ ಮೋರಿ ತುಂಬಿ ಈ ರೀತಿ ಎಲ್ಲ ಮನೆಗಳಿಗೆ ನೀರು ನುಗ್ಗಿ ಇಲ್ಲಿರುವ ಕೂಲಿ ಮಾಡಿ ಜೀವನ ನಡೆಸುವ ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿದ್ದರು.
ಆಶ್ರಯಕೊಟ್ಟ ಸಾಜಿದಾ ಬೇಗಂ: ಮೇ 18ರಂದು ಮುಂಜಾನೆ 1 ಗಂಟೆಯಿಂದ ಸುರಿದ ಭಾರೀ ಮಳೆಗೆ ವಿನಾಯಕನಗರದ ವನಜಾ ಎಂಬವರ ಮನೆ ತುಂಬೆಲ್ಲಾ ನೀರು ನುಗ್ಗಿದ್ದು, ಅವರ ಒಂದು ವರ್ಷದ ಮಗುವಿನೊಂದಿಗೆ ದಿಕ್ಕುತೋಚದಂತೆ ಇದ್ದಾಗ, ಬೆಳಗಿನ ಜಾವ 2 ಗಂಟೆಗೆ ಪಕ್ಕದ ಮನೆಯ ಸಾಜಿದಾ ಬೇಗಂ ಅವರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ವಾರ್ತಾಭಾರತಿಯೊಂದಿಗೆ ಪ್ರತಿಕ್ರಿಯಿಸಿರುವ ವನಜಾ, ನನ್ನ ಮನೆಗೆ ಮಳೆ ನೀರು ನುಗ್ಗಿದಾಗ ಸಾಜಿದಾ ಬೇಗಂ ನಮಗೆ ಆಶ್ರಯ ಕೊಟ್ಟರು. ಅಲ್ಲದೆ, ಮಳೆಯಿಂದಾಗಿ ಹಾನಿಯಾದ ಮನೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು. ನನ್ನ ಪತಿ ಕೂಲಿ ಮಾಡಿ ತಂದಿದ್ದ ಮನೆಯ ಎಲ್ಲ ವಸ್ತುಗಳು ಚರಂಡಿಯಿಂದ ಬಂದ ನೀರಿಗೆ ಹಾನಿಯಾಗಿದೆ ಎಂದು ಅಳಲು ತೋಡಿಕೊಂಡರು.
ಆಪತ್ತು ಬಂದಾಗ ಧರ್ಮ ನೋಡಲ್ಲ:
ವಿನಾಯಕನಗರದಲ್ಲಿ ನೂರಾನಿ ಮಸೀದಿ ಹಾಗೂ ಶ್ರೀ ಸೀತಾರಾಮ ಸೇವಾ ಮಂದಿರಕ್ಕೆ ಮಳೆಯ ನೀರು ಪ್ರವೇಶಿಸಿತ್ತು. ಈ ಸಂದರ್ಭದಲ್ಲಿ ಎಲ್ಲರೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಆಪತ್ತು ಬಂದಾಗ ಯಾವುದೇ ಧರ್ಮವಾದರೂ ಪರಸ್ಪರ ಸಹಾಯ ಕಾರ್ಯಕ್ಕೆ ಇಲ್ಲಿನ ಸ್ಥಳೀಯರು ಮುಂದಾಗುತ್ತೇವೆ ಎಂದು ಸ್ಥಳೀಯರಾದ ಸುಧಾಕರ್ ಹಾಗೂ ಸೈಯದ್ ಹಾರೂನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆಹಾರ ಸಾಮಾಗ್ರಿಗಳೆಲ್ಲಾ ನೀರುಪಾಲು: ಭಾರೀ ಮಳೆಯ ಪರಿಣಾಮವಾಗಿ ಚರಂಡಿಯಲ್ಲಿರುವ ನೀರು ಮನೆಯೊಳಗಿತ್ತು. ಮೇ18ರಂದು ಬೆಳಗಿನ ಜಾವ 2 ಗಂಟೆಯಿಂದ 6 ಗಂಟೆಯವರೆಗೂ ಮನೆಯಿಂದ ನೀರು ತೆಗೆದು ಹೊರ ಹಾಕುವುದೇ ಆಯಿತು. ನನಗೆ ವಯಸ್ಸಾಗಿದೆ, ನನ್ನ ಮಕ್ಕಳು ರಾತ್ರಿ ಕೆಲಸಕ್ಕೆ ಹೋಗಿದ್ದರು. ವಯಸ್ಕರು, ಗರ್ಭಿಣಿಯರಿಗೆ ಸರಿಯಾದ ವ್ಯವಸ್ಥೆಯೂ ಇರಲಿಲ್ಲ. ಭಾರೀ ಪ್ರಮಾಣದ ಅಕ್ಕಿ ಸಹಿತ ಗೃಹೋಪಯೋಗಿ ಆಹಾರಗಳು, ಬೆಡ್, ಟಿವಿ, ವಾಷಿಂಗ್ ಮೀಷನ್, ಬಟ್ಟೆನಂತಹ ವಸ್ತುಗಳು ಎಲ್ಲವೂ ನೀರಿಗೆ ಅಹುತಿಯಾಗಿದೆ.
ಆದರೆ ಇವುಗಳ ಇಎಂಐ ಕಟ್ಟುವ ಹಣ ಇನ್ನೂ ಮುಗಿದಿಲ್ಲ. ಓಟ್ ಕೇಳಲು ಬಂದಾಗ ನಮ್ಮ ಕಾಲಿಗೆ ಬೀಳುತ್ತಾರೆ. ಸಭೆ ಇದೆ ಅಂತೆಲ್ಲಾ ಹೇಳಿ ನಮ್ಮನ್ನು ಕರಿಯುತ್ತಾರೆ. ಇಷ್ಟೆಲ್ಲಾ ಬಡ ಕುಟುಂಬಗಳು ಕಂಗಾಲು ಆಗಿದ್ದರೂ ಇಲ್ಲಿಗೆ ಯಾವುದೇ ಜನಪ್ರತಿನಿಧಿ, ಅಧಿಕಾರಿಗಳು ಬರಲಿಲ್ಲ. ಇನ್ನೂ ನಾವು ಸರ್ವ ನಾಶ ಆದ ಮೇಲೆ ಬರುತ್ತಾರಾ? ಎಂದು ವಿನಾಯಕನಗರದ ಸಂತ್ರಸ್ತ ಮಹಿಳೆ ಹಂಸ ನೋವು ತೋಡಿಕೊಂಡಿದ್ದಾರೆ.
50 ದ್ವಿಚಕ್ರ, 8 ಆಟೊಗಳ ಇಂಜಿನ್ ಹಾಳು: ಇನ್ನೂ ಜನಜೀವನ ಸಂಕಷ್ಟ ಅನುಭವಿಸುವುದಲ್ಲದೇ, ಮನೆಯ ಹತ್ತಿರ ನಿಲ್ಲಿಸುವ ಆಟೊ, ದ್ವಿಚಕ್ರವಾಹನಗಳಿಗೆ ಚರಂಡಿ ನೀರು ಇಂಜಿನ್ಗೆ ಸೇರಿಕೊಂಡು ಕಾರ್ಯಚಾಲ್ತಿ ಆಗುತ್ತಿಲ್ಲ ಎಂದು ವಿನಾಯಕನಗರದ ಸ್ಥಳೀಯರ ರೋಧನೆಯಾಗಿದೆ. 50 ದ್ವಿಚಕ್ರಗಳು ಈಗಾಗಲೇ ಕಾರ್ಯಚಾಲ್ತಿಯಾಗದೆ ಗ್ಯಾರೆಜ್ ವರೆಗೂ ತಳ್ಳಿಕೊಂಡು ಹೋಗಬೇಕಾಗದ ಪರಿಸ್ಥಿತಿಯಾಗಿದೆ ಎಂದು ಸ್ಥಳೀಯರಾದ ಬಾಲಾಜಿ ಹೇಳುತ್ತಾರೆ. ದಿನದ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ 8 ಆಟೊ ರಿಕ್ಷಾಗಳು ಕೂಡ ಹಾನಿಯಾಗಿದ್ದು, ಮುಂದೇ ಏನು ಮಾಡಬೇಕು ಎಂದು ದಿಕ್ಕು ದೋಚದಂತಾಗಿದೆ ಎಂದು ಆಟೊ ರಿಕ್ಷಾಚಾಲಕ ಮಂಜುನಾಥ್ ನೋವು ಹಂಚಿಕೊಂಡಿದ್ದಾರೆ.