ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ : ಪರಪ್ಪನ ಅಗ್ರಹಾರ ಕಾರಾಗೃಹದ ವಾರ್ಡನ್ ಬಂಧನ

ಬೆಂಗಳೂರು, ಸೆ.11: ರಾಜಧಾನಿ ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಾದಕವಸ್ತು, ತಂಬಾಕು ಪೂರೈಕೆ ಮಾಡುತ್ತಿದ್ದ ಆರೋಪದಡಿ ಜೈಲು ವಾರ್ಡನ್ನನ್ನು ಇಲ್ಲಿನ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕಲ್ಲಪ್ಪ(53) ಎಂಬಾತನೇ ಬಂಧಿತ ಜೈಲು ವಾರ್ಡನ್ ಎಂದು ಗುರುತಿಸಲಾಗಿದೆ. ಸೆಪ್ಟಂಬರ್ 7ರ ಸಂಜೆ ಕರ್ತವ್ಯಕ್ಕೆ ಬರುವ ವೇಳೆ ಸಿಐಎಸ್ಎಫ್ ಸಿಬ್ಬಂದಿಗಳಿಂದ ಪ್ರವೇಶ ದ್ವಾರದ ಬಳಿ ಕಲ್ಲಪ್ಪನ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಅವರ ಖಾಕಿ ಪ್ಯಾಂಟ್ನ ಜೇಬಿನಲ್ಲಿ ಸೆಲ್ಲೋಟೇಪ್ ಸುತ್ತಿ ಇಟ್ಟಿದ್ದ 100 ಗ್ರಾಂ ಆಶಿಶ್ ಆಯಿಲ್ ಹಾಗೂ ತಂಬಾಕು ಪತ್ತೆಯಾಗಿದೆ. ಕೂಡಲೇ ಕಲ್ಲಪ್ಪನನ್ನು ಬಂಧಿಸಿ ಮಾಲನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ, ರಾತ್ರಿ ಪಾಳಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಆಗಿದ್ದ ಕಲ್ಲಪ್ಪನನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದು, ಮಾದಕವಸ್ತು ಖರೀದಿಸಿ, ಪೂರೈಸುತ್ತಿದ್ದ ಬಗ್ಗೆ ತೀವ್ರ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮಾಜಿ ಸೈನಿಕರ ಕೋಟಾದಲ್ಲಿ 2018ರಲ್ಲಿ ಕಾರಾಗೃಹ ಇಲಾಖೆಗೆ ಸೇರಿದ್ದ ಆರೋಪಿ, ಮೂರು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಯಿಂದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದರು.





