ಎನ್ಆರ್ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ ರೂ.ಗೆ ಆಗ್ರಹ; ಸಿಎಂ ಭೇಟಿಯಾದ ಝಕರಿಯಾ ಜೋಕಟ್ಟೆ

ಬೆಂಗಳೂರು : ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣಾ ಹಾಗೂ ರಾಜ್ಯೋತ್ಸವ ಪುರಸ್ಕೃತ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಎನ್ಆರ್ಐ ಫೋರಂ, ಸೌದಿ ಅರೇಬಿಯಾದ ಅಧ್ಯಕ್ಷರಾದ ಝಕರಿಯಾ ಜೋಕಟ್ಟೆ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಶನಿವಾರ ಭೇಟಿ ಮಾಡಿ ಅನಿವಾಸಿ ಕನ್ನಡಿಗರ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಇತ್ತೀಚೆಗೆ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಝಕರಿಯಾ ಜೋಕಟ್ಟೆ ಅವರು, ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿರುವಂತೆ ಪ್ರತ್ಯೇಕ ಅನಿವಾಸಿ ಖಾತೆ, ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿ ರೂ.ಆವರ್ತನ ನಿಧಿಯನ್ನು ಶೀಘ್ರವೇ ಒದಗಿಸುವಂತೆ ಅವರು ಆಗ್ರಹಿಸಿದರು.
ಬಳಿಕ ಮಾತನಾಡಿದ ಝಕರಿಯಾ ಜೋಕಟ್ಟೆ ಅವರು, "ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪಿಸುವ ಘೋಷಣೆ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನಿವಾಸಿ ಭಾರತೀಯರಿಗೆ ಶುಭಸುದ್ದಿ ನೀಡಿದ್ದಾರೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪನೆಯಿಂದ ಅನಿವಾಸಿ ಕನ್ನಡಿಗರಿಗೆ ರಾಜ್ಯದಲ್ಲಿ ಹೂಡಿಕೆಗೆ ಹಾಗೂ ಉದ್ಯೋಗ ಸೃಷ್ಠಿಗೆ ಸಹಕಾರಿಯಾಗುತ್ತದೆ. ಈಗ ಸಚಿವಾಲಯ ಮಾಡಿದ್ದಾರೆ, ಹಾಗೆಯೇ ಈ ಖಾತೆಗೆ ಪ್ರತ್ಯೇಕ ಸಚಿವರ ನೇಮಕವಾಗಬೇಕು. ಅನಿವಾಸಿ ಕನ್ನಡಿಗಾಗಿ ಸಚಿವಾಲಯಕ್ಕೆ ಶ್ರಮಿಸಿದ ವಿಧಾನ ಪರಿಷತ್ ಸದಸ್ಯರಾದ ಡಾ.ಆರತಿ ಕೃಷ್ಣಾ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ ಎನ್ಆರ್ಐ ಫೋರಂ, ಸೌದಿ ಅರೇಬಿಯಾದ ಅಧ್ಯಕ್ಷರಾದ ಝಕರಿಯಾ ಜೋಕಟ್ಟೆ ಅವರು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ, ಧನ್ಯವಾದ ತಿಳಿಸಿದರು.






