Belagavi | ಜಿಮ್ಖಾನಾ ಕ್ಲಬ್ ನಲ್ಲಿ ಗುಂಡಿಕ್ಕಿ ವ್ಯಕ್ತಿಯೋರ್ವನ ಕೊಲೆಗೆ ಯತ್ನ

ಬೆಳಗಾವಿ: ಇಲ್ಲಿನ ಜಿಮ್ಖಾನಾ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೆ ಯತ್ನಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದುಷ್ಕರ್ಮಿಗಳು ಗುಂಡಿಕ್ಕುತ್ತಿರುವುದು ಮತ್ತು ಅವರ ಕೈಯಿಂದ ಪಾರಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುರೇಶ್ ಜಾಲಗಾರ ಹತ್ಯೆ ಯತ್ನಕ್ಕೊಳಗಾದ ವ್ಯಕ್ತಿ.
ಬೆಳಗಾವಿಯ ಪೊಲೀಸ್ ಕಮಿಷನರ್ ಕಚೇರಿ ಸಮೀಪದಲ್ಲೆ ಇರುವ ಜಿಮ್ಖಾನಾ ಕ್ಲಬ್ ನಲ್ಲಿ ಕ್ಲಬ್ ನಲ್ಲಿ ಸುರೇಶ್ ಜಾಲಗಾರ ಆಡುತ್ತಿದ್ದರು. ಈ ವೇಳೆ ಐವರು ದುಷ್ಕರ್ಮಿಗಳು ಕ್ಲಬ್ ಗೆ ಆಗಮಿಸಿದ್ದಾರೆ. ಈ ಪೈಕಿ ಇಬ್ಬರು ಹೊರ ನಿಂತಿದ್ದರೆ, ಮೂವರು ಕ್ಲಬ್ ಒಳಗೆ ನುಗ್ಗಿ ಸುರೇಶ್ ಅವರ ಹತ್ಯೆಗೆ ಯತ್ನಿಸಿದ್ದಾರೆ. ಸುರೇಶ್ ರ ತಲೆಗೆ ಗನ್ ದಿಂದ ಹಲ್ಲೆಗೈದು ಬಳಿಕ ಗುಂಡು ಹಾರಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳನ್ನು ತಳ್ಳಿ ಸುರೇಶ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಸುರೇಶ್ ಅಲ್ಲಿಂದ ಹೊರಗಡೆ ಓಡಿ ಪಾರಾಗಿದ್ದು, ಈ ವೇಳೆಯೂ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿದ್ದರೆನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಗುಲಾಬ್ ರಾವ್ ಅವರು ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸೊಕೊ ತಂಡ ಕೂಡ ಆಗಮಿಸಿ, ಪರಿಶೀಲನೆ ನಡೆಸಿದೆ.
ಸುರೇಶ್ ಜಾಲಗಾರ ಈ ಹಿಂದೆ ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ದಾಳಿ ಮಾಡಿದ್ದ. ಇದಕ್ಕೆ ಪ್ರತೀಕಾರವಾಗಿ ತನ್ನ ಮೇಲೆ ಫೈರಿಂಗ್ ನಡೆದಿದೆ ಎಂದು ಸುರೇಶ್ ಜಾಲಗಾರ ಆರೋಪಿಸಿದ್ದಾರೆ.
ಸದ್ಯ ಸುರೇಶ್ ಸುರೇಶ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.






