ಮರಾಠಿಯಲ್ಲಿ ಮಾತು ಆರಂಭಿಸಿದ ಶಾಸಕ ಹಲಗೇಕರಗೆ ವೇದಿಕೆಯಲ್ಲೇ ʼಕನ್ನಡ ಪಾಠʼ ಮಾಡಿದ ಸಿಎಂ ಸಿದ್ದರಾಮಯ್ಯ!

ಬೆಳಗಾವಿ: ಮರಾಠಿಯಲ್ಲಿ ಭಾಷಣ ಆರಂಭಿಸಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲೇ ಕನ್ನಡ ಕಲಿಯುವಂತೆ ಕಿವಿಮಾತು ಹೇಳಿದ ಘಟನೆ ನಂದಗಡದಲ್ಲಿ ನಡೆದ ʼವೀರಭೂಮಿʼ ಉದ್ಘಾಟನಾ ಸಮಾರಂಭದಲ್ಲಿ ಗಮನ ಸೆಳೆಯಿತು.
ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣನ ವಸ್ತು ಸಂಗ್ರಹಾಲಯ ʼವೀರಭೂಮಿʼ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, "ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಕಲಿಯುವಂಥ ವಾತಾವರಣ ನಿರ್ಮಾಣ ಮಾಡಬೇಕು. ಯಾರು ಎಲ್ಲಿಂದ ಬಂದಿರಲಿ, ಕನ್ನಡ ನೆಲದ ಹೆಸರು ಹೇಳುವ ಮುನ್ನ ಕನ್ನಡ ಕಲಿಯಬೇಕು. ಅದನ್ನು ಅನಿವಾರ್ಯ ಮಾಡಬೇಕು. ಆಗ ಮಾತ್ರ ಕರ್ನಾಟಕ ಏಕೀಕರಣಕ್ಕೆ ನಿಜವಾದ ಅರ್ಥ ಸಿಗುತ್ತದೆ" ಎಂದು ಹೇಳಿದರು.
ಮರಾಠಿ ಭಾಷಣಕ್ಕೆ ಜನರಿಂದ ವಿರೋಧ
ಇದಕ್ಕೂ ಮುನ್ನ ಅಧ್ಯಕ್ಷೀಯ ಭಾಷಣಕ್ಕೆ ನಿಂತ ಶಾಸಕ ವಿಠ್ಠಲ ಹಲಗೇಕರ ಮರಾಠಿಯಲ್ಲಿ ಮಾತು ಆರಂಭಿಸುತ್ತಿದ್ದಂತೆ ಜನಸ್ತೋಮದಿಂದ ʼಕನ್ನಡ,ಕನ್ನಡʼ ಎಂಬ ಘೋಷಣೆಗಳು ಮೊಳಗಿದವು. ಕೂಗಾಟ ಹೆಚ್ಚಾದಾಗ ಅವರು, "ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂಬುದು ನಿಮಗೆ ಗೊತ್ತು. ಸಿದ್ದರಾಮಯ್ಯ ಅವರಿಗೆ ಮರಾಠಿ ಅರ್ಥವಾಗುವುದಿಲ್ಲ ಎಂಬುದು ನನಗೂ ಗೊತ್ತು. ನನ್ನ ಮನವಿಗಳನ್ನು ಕನ್ನಡದಲ್ಲೇ ಬರೆಸಿ ತಂದಿದ್ದೇನೆ. ಖಾನಾಪುರದಲ್ಲಿ ಕನ್ನಡ-ಮರಾಠಿ ಎಂಬ ಭೇದವಿಲ್ಲ, ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ" ಎಂದು ಮರಾಠಿಯಲ್ಲೇ ಪ್ರತಿಕ್ರಿಯಿಸಿದರು. ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರು ನಂತರ ಕನ್ನಡದಲ್ಲೇ ಮನವಿ ಓದಿದರು.
"ಕನ್ನಡದ ಅನ್ನ ಉಂಡಮೇಲೆ ಕನ್ನಡ ಕಲಿಯಿರಿ"
ಉದ್ಘಾಟನಾ ಭಾಷಣದಲ್ಲಿ ಮುಖ್ಯಮಂತ್ರಿ, "ಏನಯ್ಯ ವಿಠ್ಠಲ, ಕನ್ನಡ ಅರ್ಥವಾಗುತ್ತದೆಯೇ?" ಎಂದು ಪ್ರಶ್ನಿಸಿದರು. "ಅರ್ಥವಾಗುತ್ತದೆ ಸರ್" ಎಂದು ಹಲಗೇಕರ ಉತ್ತರಿಸಿದರು. ಆಗ ಸಿದ್ದರಾಮಯ್ಯ,"ಇಲ್ಲಿರುವವರು ಮಾತ್ರವಲ್ಲ, ಯಾರು ಎಲ್ಲೇ ಇರಲಿ, ಕನ್ನಡದ ಅನ್ನ ಉಂಡಮೇಲೆ ಕನ್ನಡ ಕಲಿಯಲೇಬೇಕು" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಜನ ಭಾಗವಹಿಸಿದ್ದರು.
ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.
— Siddaramaiah (@siddaramaiah) January 19, 2026
ಕರ್ನಾಟಕದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ರಾಜ್ಯದಲ್ಲಿ ಕನ್ನಡ ಕಲಿಯದೆಯೇ ಬದುಕಬಹುದಾದ ವಾತಾವರಣವಿದೆ. ಕನ್ನಡ ಕಲಿಯಲೇಬೇಕಾದ ಅನಿವಾರ್ಯತೆ ಇಲ್ಲ. ಬೇರೆ ಭಾಷೆಯಲ್ಲಿ ಮಾತನಾಡುವವರೊಂದಿಗೆ ನಾವು ಕನ್ನಡದಲ್ಲಿಯೇ ಮಾತನಾಡಬೇಕು. pic.twitter.com/WPDeLd8F6n







