ಬೆಳಗಾವಿ ರಾಜ್ಯದ ಎರಡನೆ ರಾಜಧಾನಿ, ಇದಕ್ಕೆ ಉತ್ತಮ ಭವಿಷ್ಯವಿದೆ: ಡಿ.ಕೆ.ಶಿವಕುಮಾರ್

ಬೆಳಗಾವಿ : ಬೆಳಗಾವಿ ರಾಜ್ಯದ ಎರಡನೆ ರಾಜಧಾನಿ, ಇದಕ್ಕೆ ಉತ್ತಮ ಭವಿಷ್ಯವಿದೆ. ಇದರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಬೆಳಗಾವಿಯ ಅಶೋಕ ವೃತ್ತದಲ್ಲಿ ನಗರಾಭಿವೃದ್ಧಿ ಹಾಗೂ ಪೌರಾಡಳಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೆಲ್ಲರಿಗೂ ದೊಡ್ಡ ಜವಾಬ್ದಾರಿ ಇದೆ. ನಮಗೆ ಎಲ್ಲ ಧರ್ಮ, ಜಾತಿ ಒಂದೇ. ನಮಗೆ ಎಲ್ಲದರ ಮೇಲೂ ನಂಬಿಕೆ ಇದೆ. ನಾವೆಲ್ಲರೂ ನಮಗೆ ಸಿಕ್ಕ ಅವಕಾಶದಲ್ಲಿ ಪರಿಸರ ಕಾಪಾಡಲು ನಮ್ಮ ಸರಕಾರದ ಯೋಜನೆಯಲ್ಲಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಬೈರತಿ ಸುರೇಶ್ ನಗರಾಭಿವೃದ್ಧಿ ಸಚಿವರಾದ ಬಳಿಕ ಸುಮಾರು 200 ಕೋಟಿ ರೂ.ಗಳಷ್ಟು ಅನುದಾನವನ್ನು ಅನೇಕ ಯೋಜನೆಗಳ ಮೂಲಕ ಈ ನಗರಕ್ಕೆ ನೀಡಿದ್ದಾರೆ. ಮುಂದೆ ನಮ್ಮ ಸರಕಾರ ಈ ಪ್ರದೇಶದ ಅಭಿವೃದ್ಧಿ ಮಾಡಿ, ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳಲಿದೆ. ನಾವು ನೀವು ಜೊತೆಯಾಗಿ ಕೈ ಜೋಡಿಸಿ ಹೆಜ್ಜೆ ಹಾಕೋಣ ಎಂದು ಶಿವಕುಮಾರ್ ಕರೆ ನೀಡಿದರು.
ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದರು. ಅದರ ಶತಮಾನೋತ್ಸವ ಹಿನ್ನೆಲೆಯಲ್ಲಿ ಕಳೆದ ವರ್ಷ ನಾವು ಬೆಳಗಾವಿಗೆ ಬಂದು ಗಾಂಧಿ ಭಾರತ ಎಂಬ ಕಾರ್ಯಕ್ರಮ ಮಾಡಿದೆವು. ಸ್ವಚ್ಛತೆ ಹಾಗೂ ಪರಿಸರ ಕಾಪಾಡುವುದು ಅದರ ಉದ್ದೇಶವಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ನಾನು ಚಿಕ್ಕ ವಯಸ್ಸಿನಲ್ಲಿ ಕ್ರಾಸ್ ಕಂಟ್ರಿ ಓಡುತ್ತಿದ್ದೆ. ಈಗ ವಯಸ್ಸಾಗಿದೆ. ಆದರೆ ನನ್ನ ಮನಸ್ಸು ನಿಮ್ಮಷ್ಟೇ ತಾರುಣ್ಯವಾಗಿದೆ. ನನ್ನ ಕೈಲಾದಷ್ಟು ನಡೆಯುತ್ತೇನೆ. ನಿಮಗೆ ಒಳ್ಳೆಯದಾಗಲಿ ಎಂದು ಶಿವಕುಮಾರ್ ತಿಳಿಸಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಕುಂದಾನಗರಿ ಬೆಳಗಾವಿ ಎಲ್ಲ ಕ್ಷೇತ್ರಗಳಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು, ಬೆಂಗಳೂರಿನಂತೆ ಉನ್ನತ ಮಟ್ಟಕ್ಕೆ ಏರುವತ್ತ ದಾಪುಗಾಲು ಇಟ್ಟಿದೆ. ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕೆಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ನಮ್ಮ ಸರಕಾರ ನಗರ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿದೆ. ನಗರಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ದೇಶದ ಸ್ವಚ್ಛ ನಗರಗಳ ಅಗ್ರ ಪಟ್ಟಿಯಲ್ಲಿ ನಮ್ಮ ರಾಜ್ಯದ ನಗರಗಳೂ ಸ್ಥಾನ ಪಡೆಯುತ್ತಿರುವುದು ಸಂತಸದ ವಿಚಾರ. ಮುಂಬರುವ ದಿನಗಳಲ್ಲಿ ಬೆಳಗಾವಿ ಸೇರಿ ಇನ್ನೂ ಹೆಚ್ಚಿನ ನಗರಗಳು ಈ ಪಟ್ಟಿಯಲ್ಲಿ ಸೇರುವಂತೆ ಮಾಡಲು ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







