Belagavi | ಮಳೆಗಾಗಿ ಕತ್ತೆಗಳ ಮದುವೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಮಂತ್ರಣ ಪತ್ರಿಕೆ

ಬೆಳಗಾವಿ: ಈ ಬಾರಿ ಮುಂಗಾರು ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಮಳೆಯಾಗಲಿ ಎಂಬ ಆಶಯದಿಂದ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮಸ್ಥರು ಕತ್ತೆಗಳ ಮದುವೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ಜನಪದ ನಂಬಿಕೆಯ ಆಧಾರದ ಮೇಲೆ, ಜುಲೈ 5ರಂದು ಮಧ್ಯಾಹ್ನ 12.15ಕ್ಕೆ ಮುನ್ಯಾಳ ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ಕತ್ತೆಗಳ ವಿವಾಹ ನೆರವೇರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದುವೆಗಾಗಿ ಗಂಡು ಕತ್ತೆಗೆ 'ಕಾಂತೇಶ' ಹಾಗೂ ಹೆಣ್ಣು ಕತ್ತೆಗೆ 'ಕಸ್ತೂರಿ' ಎಂದು ನಾಮಕರಣ ಮಾಡಲಾಗಿದೆ. ಮದುವೆಯನ್ನು ಸಾಂಪ್ರದಾಯಿಕವಾಗಿ ನಡೆಸಲು ಗ್ರಾಮಸ್ಥರು ಎರಡು ಪಂಗಡಗಳಾಗಿ ವಿಭಜನೆಯಾಗಿದ್ದು, ಒಂದು ತಂಡ ವರನ ಕಡೆಯವರಾಗಿ, ಮತ್ತೊಂದು ತಂಡ ವಧುವಿನ ಕಡೆಯವರಾಗಿ ಸಿದ್ಧತೆಗಳಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.
ಈ ರೀತಿಯ ಆಚರಣೆ ನಡೆಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇದ್ದು, ಇದೇ ವಿಶ್ವಾಸದೊಂದಿಗೆ ಗ್ರಾಮಸ್ಥರು ವಿಶಿಷ್ಟ ವಿವಾಹ ಸಮಾರಂಭದ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.






