ನಕಲಿ ಜಿಎಸ್ಟಿ ಇನ್ವೈಸ್ ತಡೆಗಟ್ಟಲು ಕ್ರಮ : ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ(PC:x/@CMofKarnataka)
ಬೆಳಗಾವಿ : ರಾಜ್ಯದಲ್ಲಿ ನಕಲಿ ಇನ್ವೈಸ್ ಸೃಷ್ಟಿಸಿ ಜಿಎಸ್ಟಿ ವಂಚನೆ ಮಾಡದಂತೆ ತಡೆಯಲು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಜಿಎಸ್ಟಿ ವಂಚನೆಗಾಗಿಯೇ ನಕಲಿ ದಾಖಲಾತಿ ಸೃಷ್ಟಿಸಿ ಯಾವುದೇ ಸರಕುಗಳನ್ನು ಪೂರೈಸದೆ ನಕಲಿ ಇನ್ವೈಸ್ ಸೃಷ್ಟಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಪ್ರಯತ್ನಿಸಿ 2437 ಕಂಪೆನಿಗಳು ಸಿಕ್ಕಿಬಿದ್ದಿವೆ ಎಂದರು.
ಈ ತೆರಿಗೆ ವಂಚನೆ ಅಕ್ರಮವನ್ನು ತಡೆಗಟ್ಟಲು ಸರಕಾರದಿಂದ ನೇಮಕಗೊಂಡ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು 752 ಪ್ರಕರಣಗಳಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಈ ಪ್ರಕರಣಗಳಲ್ಲಿ 429 ವಂಚನೆ ಪ್ರಕರಣಗಳಿಗೆ ನ್ಯಾಯನಿರ್ಣಯ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ. ಉಳಿದ ಪ್ರಕರಣಗಳು ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ಹಂತದಲ್ಲಿವೆ ಎಂದು ಸಿದ್ದರಾಮಯ್ಯ ಹೇಳಿದರು.
ನಕಲಿ ಇನ್ವೈಸ್ ಗಳ ಮೂಲಕ ರಾಜ್ಯದ ತೆರಿಗೆ ಸೋರಿಕೆಯಾಗದಂತೆ ರಾಜ್ಯದ ಜಿಎಸ್ಟಿ ಜಾರಿ ವಿಭಾಗದ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.







