ಬೆಳಗಾವಿ | ಮಸೀದಿಯಲ್ಲಿ ಬಾಲಕಿಯ ಅತ್ಯಾಚಾರ; ಆರೋಪಿ ತುಫೇಲ್ ಅಹ್ಮದ್ ಬಂಧನ

ಆರೋಪಿ ತುಫೇಲ್ ಅಹ್ಮದ್ ನಾಗರ್ಚಿ(22)
ಬೆಳಗಾವಿ : ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಎರಡು ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ತುಫೇಲ್ ಅಹ್ಮದ್ ನಾಗರ್ಚಿ(22) ಎಂಬಾತ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಮಸೀದಿಯೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಕ್ಷ್ಯವನ್ನು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
2023ರ ಅಕ್ಟೋಬರ್ 5ರಂದು ಐದು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಕೃತ್ಯದ ಘಟನೆ ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ. ತಗಡಿನ ಶೆಡ್ ನಿರ್ಮಾಣದ ಕೆಲಸ ಮಾಡುವ ಆರೋಪಿ, ಆಗಾಗ ಮಸೀದಿಗಳಿಗೆ ಹೋಗಿ ಧರ್ಮ ಬೋಧನೆ ಕೂಡ ಮಾಡುತ್ತಿದ್ದ ಎನ್ನಲಾಗಿದೆ. ಮಸೀದಿ ಪಕ್ಕದಲ್ಲಿರುವ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ಎಸಗಿದ್ದ. ಇದು ಮಸೀದಿಯೊಳಗಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಆದರೆ, ಕೆಲವು ವ್ಯಕ್ತಿಗಳು ತಮ್ಮ ತಮ್ಮಲ್ಲೇ ರಾಜೀ ಪಂಚಾಯಿತಿ ನಡೆಸಿ ಪ್ರಕರಣ ಮುಚ್ಚಿಹಾಕಿದ್ದರು. ಬಾಲಕಿಯ ಪಾಲಕರೂ ದೂರು ಕೊಟ್ಟಿರಲಿಲ್ಲ. ಈಚೆಗಷ್ಟೇ ಬಾಲಕಿಯ ತಂದೆ ಈ ವಿಷಯವನ್ನು ಇನ್ನೊಬ್ಬರೊಂದಿಗೆ ಮೊಬೈಲ್ನಲ್ಲಿ ಹೇಳಿಕೊಂಡಿದ್ದರು.
ಎಸ್ಪಿ ಹೇಳಿದ್ದೇನು:
ʼಅತ್ಯಾಚಾರದ ವಿಡಿಯೋ ತುಣುಕು ಹಾಗೂ ಬಾಲಕಿಯ ತಂದೆ ಮಾತನಾಡಿದ ಆಡಿಯೋ ತುಣುಕು ಕೂಡ ಇತ್ತು. ಜಿಲ್ಲಾ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ಕೋಶದವರು ಇದನ್ನೇ ಸಾಕ್ಷಿಯಾಗಿ ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ, ಅತ್ಯಾಚಾರದ ವಿಷಯ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದರು.
‘ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡ ರಚಿಸಿ, ಬುಧವಾರ ಆರೋಪಿಯನ್ನು ವಶಕ್ಕೆ ಪಡೆಲಾಯಿತು. ತಂದೆ–ತಾಯಿ ಜತೆಗೆ ಜಗಳ ಮಾಡಿಕೊಂಡು ಚಿಕ್ಕಮ್ಮನ ಮನೆಗೆ ಬಂದಿದ್ದ ಆರೋಪಿ ಈ ದೃಷ್ಕೃತ್ಯ ಎಸಗಿದ್ದಾನೆ’ ಎಂದರು.
‘ಇದರಲ್ಲಿ ಮಸೀದಿಯವರು ನೇರ ಆರೋಪಿಗಳಾಗಿಲ್ಲ. ಸಂಧಾನ ಮಾಡಿ ಪ್ರಕರಣ ಮುಚ್ಚಲು ಯತ್ನಿಸಿದವರನ್ನು ವಿಚಾರಣೆ ಮಾಡಲಾಗುತ್ತಿದೆ. 2024ರ ಜುಲೈ 1ಕ್ಕಿಂತ ಮುಂಚೆ ಆಗಿದ್ದರಿಂದ ಐಪಿಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ’ ಎಂದರು.
‘ದೂರು ನೀಡುವಂತೆ ಪೊಲೀಸರು ಬಾಲಕಿಯ ಪಾಲಕರಿಗೆ ಮನವಿ ಮಾಡಿದರೂ ಅವರು ನಿರಾಕರಿಸಿದ್ದಾರೆ. ಹೀಗಾಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ, ಅಂಗನವಾಡಿ ಕಾರ್ಯಕರ್ತೆಯ ಮೂಲಕ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದೂ ಎಸ್.ಪಿ ತಿಳಿಸಿದರು.







