Ballari | ಅರಳಿಹಳ್ಳಿ ತಾಂಡದಲ್ಲಿ ಎಸ್ಐಆರ್ ಶೇ.100ರಷ್ಟು ಪೂರ್ಣ; ಬಿಎಲ್ಒಗೆ ಸನ್ಮಾನ

ಬಳ್ಳಾರಿ/ಕಂಪ್ಲಿ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಹಳ್ಳಿ ತಾಂಡ ಶೇ.100ರಷ್ಟು ಪ್ರಗತಿ ಸಾಧಿಸಿದ್ದು, ಈ ಸಾಧನೆಗೆ ಕಾರಣರಾದ ಮತಗಟ್ಟೆ ಅಧಿಕಾರಿ (ಬಿಎಲ್ಒ) ಕಟ್ಟಿಮನಿ ಸರಸ್ವತಿ ಅವರನ್ನು ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಜೂಗಲ್ ಮಂಜುನಾಯಕ ಅವರು ಸನ್ಮಾನಿಸಿ ಗೌರವಿಸಿದರು.
ಅರಳಿಹಳ್ಳಿ ತಾಂಡದಲ್ಲಿ ಒಟ್ಟು 683 ಮತದಾರರಿದ್ದು, ಎಲ್ಲರ ಮನೆಗಳಿಗೆ ಎನ್ಯುಮರೇಷನ್ ಅರ್ಜಿಗಳನ್ನು ಸಮರ್ಪಕವಾಗಿ ವಿತರಿಸುವುದರ ಜೊತೆಗೆ, ಭರ್ತಿ ಮಾಡಿದ ಅರ್ಜಿಗಳನ್ನು ಮರಳಿ ಪಡೆದು ಆನ್ಲೈನ್ ಮೂಲಕ ಯಶಸ್ವಿಯಾಗಿ ಅಪ್ಲೋಡ್ ಮಾಡುವ ಕಾರ್ಯವನ್ನು ಮತಗಟ್ಟೆ ಸಂಖ್ಯೆ–5ರ ಬಿಎಲ್ಒ ಕಟ್ಟಿಮನಿ ಸರಸ್ವತಿ ಪೂರ್ಣಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜೂಗಲ್ ಮಂಜುನಾಯಕ, ಕಂಪ್ಲಿ ತಾಲೂಕಿನಾದ್ಯಂತ ಎಸ್ಐಆರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅರಳಿಹಳ್ಳಿ ತಾಂಡದಲ್ಲಿ ಶೇ.100 ಸಾಧನೆ ಮಾಡಿರುವ ಬಿಎಲ್ಒ ಕಟ್ಟಿಮನಿ ಸರಸ್ವತಿ ಇತರ ಮತಗಟ್ಟೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಈ ಯಶಸ್ಸಿನಲ್ಲಿ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ನಾಯಕ ಅವರ ಪಾತ್ರವೂ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಾಲೂಕಿನ ಎಲ್ಲ ಬಿಎಲ್ಒಗಳು ಇದೇ ರೀತಿಯ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಲು ಸಹಕರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ಜಿ. ಪಂಪಾಪತಿ, ಎಸ್.ಕೆ. ರಮೇಶ್, ಕಂದಾಯಾಧಿಕಾರಿ ವೈ.ಎಂ. ಜಗದೀಶ್, ಚುನಾವಣಾ ವಿಭಾಗದ ನಿರ್ವಾಹಕ ಸುರೇಶ್, ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.






